ಬಿಜೆಪಿ ಸಂಸ್ಥಾಪಕರಲ್ಲಿ ನಾನು ಒಬ್ಬ, ವೇದಿಕೆಯಲ್ಲಿ ಸ್ಥಾನ ಇಲ್ಲಂದ್ರೆ ಏನರ್ಥ-ಮಾಜಿ ಸಚಿವ ರಾಮಚಂದ್ರಗೌಡ ಅಸಮಾಧಾನ

Public TV
1 Min Read

ಬೆಂಗಳೂರು: ಬಿಜೆಪಿ ಸಂಸ್ಥಾಪಕರಲ್ಲಿ ನಾನು ಒಬ್ಬ. ಕಾರ್ಯಕ್ರಮದ ವೇದಿಕೆಯಲ್ಲಿ ನನಗೆ ಸ್ಥಾನವಿಲ್ಲ ಅಂದ್ರೆ ಏನಿದರರ್ಥ ಎಂದು ಮಾಜಿ ಸಚಿವ ರಾಮಚಂದ್ರಗೌಡ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಎದುರೇ ಅಸಮಾಧಾನ ಹೊರಹಾಕಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ರ 127 ನೇ ಜಯಂತ್ಯೋತ್ಸವ ಹಿನ್ನೆಲೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿಯಾದ ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ರಾಮಚಂದ್ರೇಗೌಡ, ಡಿ.ಎಸ್.ವೀರಯ್ಯ ಭಾಗಿಯಾಗಿದ್ದರು.

ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಬಿಜೆಪಿ ಹಿರಿಯ ನಾಯಕ ರಾಮಚಂದ್ರೇಗೌಡ ವೇದಿಕೆಯಲ್ಲಿ ತಮಗೇ ಸ್ಥಾನ ಕಲ್ಪಿಸಿಕೊಡದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಅವರನ್ನು ಸಮಾಧಾನಪಡಿಸಿ ವೇದಿಕೆಗೆ ಕರೆತಂದ ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ್ ವೇದಿಕೆಯಲ್ಲಿದ್ದ ಪ್ರಕಾಶ್ ಜಾವಡೇಕರ್ ಸೂಚನೆ ಮೇರೆಗೆ ಮೊದಲಿಗೇ ಭಾಷಣ ಮಾಡಲು ರಾಮಚಂದ್ರೇಗೌಡರಿಗೆ ಅವಕಾಶ ನೀಡಿದರು.

ಕಾರ್ಯಕ್ರಮದ ಕುರಿತು ಮಾತನಾಡಿದ ರಾಮಚಂದ್ರಗೌಡರು 1952ರಲ್ಲಿ ಅಂಬೇಡ್ಕರ್ ಬೆಂಗಳೂರಿಗೆ ಬಂದಿದ್ದ ಘಟನೆಯನ್ನು ನೆನೆದರು. ಅಲ್ಲದೇ ಆ ವೇಳೆ ಅವರನ್ನು ಭೇಟಿ ಮಾಡಿ ಅವರ ಕಾಲಿಗೆ ನಮಸ್ಕಾರ ಮಾಡಿರುವುದಾಗಿ ತಿಳಿಸಿದರು. ಅಲ್ಲದೇ ನಿಮ್ಮಲ್ಲಿ ಎಷ್ಟು ಜನ ಅಂಬೇಡ್ಕರ್ ರನ್ನು ನೋಡಿದ್ದೀರಾ? ಅಂಬೇಡ್ಕರ್ ಆಧುನಿಕ ಋಷಿ, ಬಹುತೇಕ ಋಷಿಗಳು ತಮ್ಮ ವೈಯಕ್ತಿಕ ಜೀವನಕ್ಕಾಗಿ ಬರೆದರು. ಆದರೆ ಅಂಬೇಡ್ಕರ್ ಸಮಾಜಕ್ಕಾಗಿ ಸಂವಿಧಾನ ಗ್ರಂಥ ಬರೆದರು ಎಂದರು. ಬಳಿಕ ಮೀಸಲಾತಿ ಕುರಿತು ಪ್ರಸ್ತಾಪಿಸಿ ನಾನೂ ಕೂಡ ಒಂದು ಮೀಸಲಾತಿ ವಿಭಾಗಕ್ಕೆ ಸೇರುತ್ತೇನೆ. ಆದರೆ ನನಗೆ ಮೀಸಲಾತಿ ಬೇಡ, ಆದರೆ ನನ್ನ ತಮ್ಮನಿಗೆ ಬೇಕು. ಹಾಗಾಗಿ ಯಾರಿಗೆ ಮೀಸಲಾತಿ ಬೇಕು. ಯಾರಿಗೆ ಬೇಡ ಎಂಬುದನ್ನು ನಿರ್ಧರಿಸಬೇಕಾದ ಕಾಲ ಬಂದಿದೆ ಎಂದು ತಿಳಿಸಿದರು.

ರಾಮಚಂದ್ರಗೌಡರ ಘಟನೆಯಿಂದ ಮುಜುಗರಕ್ಕೆ ಒಳಗಾದ ಜಾವೇಡ್ಕರ್ ಕಾರ್ಯಕ್ರಮದಲ್ಲಿ ಭಾಷಣ ಮಾಡದೆ ವೇದಿಕೆ ಇಂದ ನಿರ್ಗಮಿಸಿದರು.

Share This Article
Leave a Comment

Leave a Reply

Your email address will not be published. Required fields are marked *