ಕೆಲ ಮನಸ್ಸುಗಳಿಗೆ ಬಿತ್ತು ಬ್ರೇಕ್: ಕಂಬಳ ಮತ್ತೆ ಆರಂಭಗೊಂಡಿದ್ದಕ್ಕೆ ಸಂಭ್ರಮಿಸಿದ ಸೆಹ್ವಾಗ್

Public TV
2 Min Read

ನವದೆಹಲಿ: ಕರಾವಳಿಯ ಜಾನಪದ ಕ್ರೀಡೆ ಕಂಬಳ ಮಸೂದೆಗೆ ಕೊನೆಗೂ ರಾಷ್ಟ್ರಪತಿ ಅಂಕಿತ ಸಿಕ್ಕಿದ್ದು, ಈ ಕುರಿತು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿರೋ ಸೆಹ್ವಾಗ್, `ಕಂಬಳದ ಕುರಿತಂತೆ ರಾಷ್ಟ್ರಪತಿ ಅವರು ಅಂಕಿತ ಹಾಕುವ ಮೂಲಕ ಎಲ್ಲಾ ಅಡೆತಡೆಗಳಿಗೆ ಬ್ರೇಕ್ ಬಿದ್ದಿರುವುದು ನಿಜಕ್ಕೂ ಖುಷಿಯ ವಿಚಾರವಾಗಿದೆ. ಈ ಮೂಲಕ ಗ್ರಾಮೀಣ ಭಾಗದ ಕ್ರೀಡೆಗೆ ಉತ್ತೇಜನ ನೀಡಿರುವುದು ಸಂತಸ ತಂದಿದೆ. ಪ್ರಾಣಿ ಹಿಂಸೆ ನೆಪದಲ್ಲಿ ಈ ಗ್ರಾಮೀಣ ಭಾಗದ ಕ್ರೀಡೆಯನ್ನು ನಿಷೇಧಿಸಲು ಹೊರಟಿದ್ದ ಕೆಲವು ಮನಸ್ಸುಗಳಿಗೆ ಬ್ರೇಕ್ ಬಿದ್ದಿರುವುದು ಖುಷಿಯ ವಿಚಾರವೇ ಸರಿ. ಒಟ್ಟಿನಲ್ಲಿ ಕರ್ನಾಟಕದ ಗ್ರಾಮೀಣ ಕ್ರೀಡೆಯಾಗಿ ಕಂಬಳಕ್ಕೆ ಮಾನ್ಯತೆ ಸಿಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಪ್ರಾಣಿದಯಾ ಸಂಘ ಸಂಸ್ಥೆ ಸಲ್ಲಿಸಿದ್ದ ಅರ್ಜಿ ಹಿನ್ನೆಲೆ ಕಂಬಳಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ಇದರ ವಿರುದ್ಧವಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ರಾಜ್ಯ ಸರ್ಕಾರ ಮಂಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹಿ ಹಾಕಿದ್ದರು. ಇದನ್ನೂ ಓದಿ: ಕಂಬಳ ಮಸೂದೆಗೆ ರಾಷ್ಟ್ರಪತಿ ಅಂಕಿತ, ಎಲ್ಲ ಅಡೆ ತಡೆ ನಿವಾರಣೆ

ಸುಗ್ರಿವಾಜ್ಞೆ ಅವಧಿ ಮುಗಿದ ಕಾರಣ ಈ ವರ್ಷ ಕಂಬಳಕ್ಕೆ ಅನುಮತಿ ನೀಡಬಾರದು ಎಂದು ಪೇಟಾ ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿತ್ತು. ವಿಚಾರಣೆ ವೇಳೆ ರಾಜ್ಯದ ಪರ ವಕೀಲರು ಮಸೂದೆ ಅಂಗೀಕಾರವಾಗಿದ್ದು, ರಾಷ್ಟ್ರಪತಿಗಳ ಅಂಕಿತ ಬೀಳಲು ಬಾಕಿಯಿದೆ ಎಂದು ವಾದಿಸಿದ್ದರು. ಸರ್ಕಾರದ ವಾದವನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಕಂಬಳ ಕ್ರೀಡೆಗೆ ತಡೆ ನೀಡಲು ನಿರಾಕರಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ನ್ಯಾಯಮೂರ್ತಿಗಳಾದ ಎ.ಎಂ.ಕನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ದ್ವಿಸದಸ್ಯ ಪೀಠ ಸುಪ್ರೀಂ ಕೋರ್ಟ್ ಮಾರ್ಚ್ 14ಕ್ಕೆ ಮುಂದೂಡಿತ್ತು.

ಗೌರವಾನ್ವಿತ ರಾಷ್ಟ್ರಪತಿಗಳು ತಮ್ಮ ಬಳಿ ಇದ್ದ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳ ಮಸೂದೆಗೆ ಅಂಕಿತ ಹಾಕಿದಕ್ಕಾಗಿ ಪ್ರೀತಿಯ ಸೊಲ್ಮೆಲು. ಇದರಿಂದ ಈವರೆಗೆ ಕಂಬಳಕ್ಕೆಇದ್ದ ಎಲ್ಲ ಅಡ್ಡಿ ಆತಂಕಗಳು ನಿವಾರಣೆಯಾಗಿದೆ ಇದಕ್ಕೆ ಸಂಭಂದಿಸಿದ ಸುತ್ತೋಲೆ ಈಗಾಗಲೇ ರಾಜ್ಯ ಸರಕಾರಕ್ಕೆ ರವಾನೆಯಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿವಿ ಸದಾನಂದ ಗೌಡ ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *