ಮಾಜಿ ಉಪಸಭಾಪತಿ, ಹಿರಿಯ ನ್ಯಾಯವಾದಿ ಡಾ.ಎನ್.ತಿಪ್ಪಣ್ಣ ನಿಧನ

Public TV
1 Min Read

ಬೆಂಗಳೂರು/ಬಳ್ಳಾರಿ: ಮಾಜಿ ಉಪಸಭಾಪತಿ, ಹಿರಿಯ ವಕೀಲರು, ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷರಾಗಿದ್ದ ಹಿರಿಯ ಮುತ್ಸದ್ದಿ ಎನ್.ತಿಪ್ಪಣ್ಣ (N.Thippanna) ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು (ಜು.11) ಬೆಳಿಗ್ಗೆ 5 ಗಂಟೆ ಸುಮಾರಿಗೆ ಬಳ್ಳಾರಿಯ (Ballary) ಗಾಂಧಿನಗರದ (Gandhi Nagar) ನಿವಾಸದಲ್ಲಿ ತಮ್ಮ 98ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಎರಡು ಬಾರಿ ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಅನುಭವಿ ಹಿರಿಯ ನ್ಯಾಯವಾದಿ, ಸಮಾಜ ಸೇವಕರಾಗಿ ಸಾಕಷ್ಟು ಹೆಸರು ಮಾಡಿದ್ದರು. ಇಂದು ಬಳ್ಳಾರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಶನಿವಾರ ತಿಪ್ಪಣ್ಣ ಅವರ ಸ್ವಗ್ರಾಮ ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಬಸ್‌ ಫ್ರೀ – ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

-ಡಾ.ಎನ್.ತಿಪ್ಪಣ್ಣ ನಿಧನಕ್ಕೆ ಈಶ್ವರ ಖಂಡ್ರೆ ಸಂತಾಪ:
ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದ ತಿಪ್ಪಣ್ಣನವರು ನಮ್ಮ ತಂದೆ ಶತಾಯುಷಿ ಭೀಮಣ್ಣ ಖಂಡ್ರೆ ಅವರೊಂದಿಗೆ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ್ದರು. ಬಸವಾದಿ ಪ್ರಮಥರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಪಾಲಿಸುತ್ತಿದ್ದ ಅವರು ಸಾವಿರಾರು ವಿದ್ಯಾರ್ಥಿಗಳ ಅನ್ನದಾಸೋಹ, ಜ್ಞಾನದಾಸೋಹಕ್ಕೆ ನೆರವಾಗಿದ್ದರು ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಹಿರಿಯ ನ್ಯಾಯವಾದಿಗಳಾಗಿ, ಸಾರ್ವಜನಿಕ ಅಭಿಯೋಜಕರಾಗಿ, ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ, ವಿಧಾನಪರಿಷತ್ ಸದಸ್ಯರಾಗಿ, ಉಪಸಭಾಪತಿಗಳಾಗಿ ನಾನಾ ಕ್ಷೇತ್ರದಲ್ಲಿ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆ ಅನುಪಮವಾದ್ದು. ಎಲ್ಲ ಕ್ಷೇತ್ರದಲ್ಲೂ ಅವರು ತಮ್ಮದೇ ಛಾಪು ಮೂಡಿಸಿದ್ದರು. ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳಾಗಿದ್ದ ತಿಪ್ಪಣ್ಣನವರ ಆತ್ಮಕ್ಕೆ ಈಶ್ವರ ಚಿರಶಾಂತಿ ನೀಡಲಿ, ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬಂಧು ಮಿತ್ರರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪದಲ್ಲಿ ಸೂಚಿಸಿದ್ದಾರೆ.ಇದನ್ನೂ ಓದಿ: ವಿಶ್ವದ ಪ್ರತಿಷ್ಠಿತ ಕಾರು ಸಂಸ್ಥೆ ರೋಲ್ಸ್ ರಾಯ್ಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಕನ್ನಡತಿ

 

Share This Article