ಆಶಾದಾಯಕವಲ್ಲದ ಬಜೆಟ್- ಅನ್ನಭಾಗ್ಯದ ಅಕ್ಕಿ ಉಳಿಸಿ ಆಪರೇಷನ್ ಕಮಲ ಮಾಡ್ತಾರಾ?: ಸಿದ್ದು ಪ್ರಶ್ನೆ

Public TV
2 Min Read

ಮೈಸೂರು: ಇಂದು ಮಂಡನೆಯಾದ ಕೇಂದ್ರ ಸರ್ಕಾರದ ಬಜೆಟ್ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಇದು ಆಶಾದಾಯಕ ಬಜೆಟ್ ಅಲ್ಲ. 30 ಲಕ್ಷ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಕಳೆದ ಬಜೆಟ್‍ಗೂ ಈ ಬಾರಿಯ ಬಿಜೆಟ್‍ಗೂ 3 ಲಕ್ಷ ಕೋಟಿ ರೂ. ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ.

ಕಳೆದ ಬಜೆಟ್ ಅಂದಾಜು ವೆಚ್ಚದಲ್ಲಿ 2 ಲಕ್ಷ ಕೋಟಿ ರೂ. ಕಡಿಮೆ ಖರ್ಚಾಗಿದೆ. ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿಯ ಆದಾಯ ಬಂದಿಲ್ಲ. ಇದರಿಂದ ರಾಜ್ಯಗಳಿಗೆ ಬರಬೇಕಾದ ಪಾಲು ಖೋತಾ ಆಗಿದೆ. ದೇಶದ ಆದಾಯವನ್ನು 5 ಟ್ರಿಲಿಯನ್ ಡಾಲರ್ ಮಾಡುತ್ತೇವೆ ಎಂದಿದ್ದರು. ಆದರೆ ಇದು ಅದು ಸಾಧ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಾಗುತ್ತಿದೆ. ಜಿಡಿಪಿ ಕುಸಿತಗೊಂಡಿದೆ. ದೇಶದ ಆದಾಯ ಪಾತಾಳಕ್ಕೆ ಹೊರಟು ಹೋಗಿದೆ. ಇದರಿಂದ ಹೆಚ್ಚು ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಜಿಡಿಪಿ 6% ತರ್ತಿವಿ ಅಂತಿದ್ದಾರೆ. ಆದ್ರೆ ಅದು ಗಗನ ಕುಸುಮ ಆಗಲಿದೆ. ಜಿಡಿಪಿ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ವೇಳೆ ಅನ್ನಭಾಗ್ಯ ಯೋಜನೆಯ ಅಕ್ಕಿ ಕೊಡುವುದು ಬಡವರ ಯೋಜನೆ. ಬಡವರ ಪರವಾದ ಯೋಜನೆ ಮುಂದುವರಿಸಲು ಸರ್ಕಾರಕ್ಕೆ ಇಷ್ಟ ಇಲ್ಲ. ಹಾಗಾಗಿ ಅನ್ನಭಾಗ್ಯದ ಅಕ್ಕಿ ಕಡಿತಕ್ಕೆ ಮುಂದಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಅಕ್ಕಿ ಕಡಿತದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದರು.

ಅಕ್ಕಿ ಕಡಿತ ಮಾಡುತ್ತೇವೆ ಎಂದು ಸಚಿವೆ ಶಶಿಕಲ್ಲಾ ಜೊಲ್ಲೆ ಹೇಳಿಲ್ಲ. ಇದನ್ನ ಯಡಿಯೂರಪ್ಪ ಹೇಳಿಸಿರೋದು. ಅಕ್ಕಿ ದುಡ್ಡು ಉಳಿಸಿ ಏನ್ ಮಾಡ್ತಾರಂತೆ? ಆಪರೇಷನ್ ಕಮಲ ಮಾಡೋಕಾ ಎಂದು ಪ್ರಶ್ನಿಸಿದರು. ಒಬ್ಬೊಬ್ಬ ಶಾಸಕರನ್ನು ಕರೆದುಕೊಂಡು ಹೋಗಲು 25 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಎಲೆಕ್ಷನ್‍ಗೆ 35 ಕೋಟಿ ನೀಡಿದ್ದರು. ಅಷ್ಟೊಂದು ದುಡ್ಡು ಎಲ್ಲಿಂದ ಬಂತು. ಇದನೇಲ್ಲಾ ನೋಡಿದ ಮೇಲೂ ನಿರ್ಮಲಾ ಸೀತರಾಮನ್ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುತ್ತೇವೆ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.

Share This Article
Leave a Comment

Leave a Reply

Your email address will not be published. Required fields are marked *