ಸಮ್ಮಿಶ್ರ ಸರ್ಕಾರಕ್ಕೀಗ ಸಿದ್ದರಾಮಯ್ಯ ಟ್ರಬಲ್ ಶೂಟರ್!

Public TV
2 Min Read

– ಮುಂಬೈಗೆ ತೆರಳಿದ್ದಾರೆ ಕಾಂಗ್ರೆಸ್ ಶಾಸಕರು

ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಅವರು ಸಮ್ಮಿಶ್ರ ಸರ್ಕಾರಕ್ಕೀಗ ಟ್ರಬಲ್ ಶೂಟರ್ ಅಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ದೋಸ್ತಿಗಳ ಟ್ರಬಲ್ ಶೂಟರ್ ಆಗಿದ್ದಾರೆ.

ಸಿದ್ದರಾಮಯ್ಯ ಫೀಲ್ಡ್‍ಗಿಳಿದ್ರೆ ಮಾತ್ರವೇ ಸಮ್ಮಿಶ್ರ ಸರ್ಕಾರಕ್ಕೆ ಉಳಿಗಾಲ ಎಂಬಂತಾಗಿದೆ. ಶನಿವಾರದಿಂದ ಅತೃಪ್ತ ಶಾಸಕರ ಜತೆ ಸಿದ್ದರಾಮಯ್ಯ ನಿರಂತರ ಸಂಪರ್ಕದಲ್ಲಿದ್ದಾರೆ. ಮಾಜಿ ಸಿಎಂ ಅವರು ದೂರವಾಣಿ ಕರೆ ಮಾಡಿ ಮನೆಗೆ ಕರೆಸಿ ಮಾತಾನಾಡುತ್ತಿದ್ದಾರೆ. ಮತ್ತೆ ಕೆಲವರಿಗೆ ದೂರವಾಣಿಯಲ್ಲೇ ಸಮಾಧಾನಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ನಿನ್ನೆ ತಮಿಳುನಾಡಿನತ್ತ ಹೊರಟಿದ್ದ ಶಾಸಕರ ಜತೆಗೂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ್ರೆ ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರ್ಕಾರದ ರಕ್ಷಕರಾಗಿ ಬಿಟ್ರಾ?ಮಾಜಿ ಸಿಎಂ ಸಿದ್ದು ಅವರೇ ಶಾಸಕರನ್ನ ಎಲ್ಲೂ ಹೋಗದಂತೆ ತಡೆಯುತ್ತಾರಾ ಅನ್ನೋ ಪ್ರಶ್ನೆಗಳು ಇದೀಗ ಎದ್ದಿವೆ. ಇದನ್ನೂ ಓದಿ; ಅತೃಪ್ತ ಶಾಸಕರಿಗೆ ಎಐಸಿಸಿ ಖಡಕ್ ವಾರ್ನಿಂಗ್

ಇತ್ತ ರಾಜ್ಯದ ದೋಸ್ತಿ ಸರ್ಕಾರ ಉರುಳಿಸಲು ಬಿಜೆಪಿ ರೆಸಾರ್ಟ್ ಪಾಲಿಟಿಕ್ಸ್ ಶುರು ಮಾಡ್ಕೊಂಡಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ ಆಪರೇಷನ್ ಗಾಳಕ್ಕೆ ಸಿಲುಕಿದ್ದಾರೆ ಎನ್ನಲಾದ ಕಾಂಗ್ರೆಸ್‍ನ ಹಲವು ಅತೃಪ್ತ ಶಾಸಕರು ಮುಂಬೈಗೆ ಹಾರಿದ್ದಾರೆ ಅನ್ನೋ ಸುದ್ದಿ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಚಿವ ಸ್ಥಾನ ಸಿಗದ ಕಾರಣಕ್ಕೆ ಕಾಂಗ್ರೆಸ್ ಶಾಸಕ ಡಾ. ಸುಧಾಕರ್, ಎಂಟಿಬಿ ನಾಗರಾಜ್, ಮತ್ತು ಮುಳಬಾಗಲು ಪಕ್ಷೇತರ ಶಾಸಕ ಹೆಚ್ ನಾಗೇಶ್ ಒಂದೇ ಕಾರ್‍ನಲ್ಲಿ ಚೆನ್ನೈ ಕಡೆ ಹೊರಟವರು ನಂತ್ರ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.

ಆದ್ರೆ ಈ ಬಗ್ಗೆ ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯಿಸಿದ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ನಾನೇ ಒಬ್ಬ ಡಾಕ್ಟರ್ ನಾನ್ಯಾಕೆ ಆಪರೇಷನ್ ಕಮಲಕ್ಕೆ ತುತ್ತಾಗ್ತೇನೆ. ನನಗೆ ರಾಹುಲ್ ಗಾಂಧಿಯವರ ಮೇಲೆ ನಂಬಿಕೆ ಇದೆ ಎಂದಿದ್ದಾರೆ.

ಹಿರೇಕೆರೂರಿನಲ್ಲಿ ಪ್ರತಿಕ್ರಿಯಿಸಿದ ಶಾಸಕ ಬಿಸಿ ಪಾಟೀಲ್, ನಾನು ಮುಂಬೈಗೆ ಹೋಗಬೇಕು ಅಂದಿದ್ದರೇ ನಾನು ಹಿರೇಕೆರೂರಿಗೆ ಬರುತ್ತಲೇ ಇರಲಿಲ್ಲ. ನಾನು ಕೊಲ್ಲಾಪುರಕ್ಕೆ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿದ್ದೆ. ಬಿಜೆಪಿ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇನ್ನು ಕಂಪ್ಲಿ ಶಾಸಕ ಗಣೇಶ್ ಪ್ರತಿಕ್ರಿಯಿಸಿ, ನಾನು ಮುಂಬೈಗೆ ಹೋಗ್ತಿಲ್ಲ ಅಂತ ಸ್ಪಷ್ಟಪಡಿಸಿದ್ರು.

ಕಾಂಗ್ರೆಸ್‍ನ ಇನ್ನೂ ಏಳೆಂಟು ಶಾಸಕರನ್ನ ಸೆಳೆಯಲು ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಹೀಗಾಗಿ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಹರಸಾಹಸ ಪಡ್ತಿದ್ದಾರೆ. ಮುಂಬೈಗೆ ಹೋಗ್ತಿರೋ ಶಾಸಕರನ್ನ ವಾಪಸ್ ಬರುವಂತೆ ಖುದ್ದು ಎಐಸಿಸಿ ಎಚ್ಚರಿಸಿದೆ. ಪಕ್ಷದ ಹೈಕಮಾಂಡ್ ಮಾತಿಗೆ ಅತೃಪ್ತ ಶಾಸಕರು ಬಗ್ತಾರಾ ಅನ್ನೋದನ್ನ ಕಾದು ನೋಡ್ಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *