‘ಹಲೋ…, ಎಲ್ಲಿದ್ದೀಯಾ ನಾರಾಯಣರಾವ್ ಜಲ್ದಿ ಬಂದ್ಬಿಡು, ಜಲ್ದಿ ಬಂದ್ಬಿಡು’ ಅಂದ್ರು ಸಿದ್ದರಾಮಯ್ಯ, ಏರ್ ಪೋರ್ಟಿಂದ ಓಡೋಡಿ ಬಂದ್ರು ನಾರಾಯಣ ರಾವ್!

Public TV
1 Min Read

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಹಲವು ಹಾಸ್ಯಮಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಇಂದು ವಿಧಾನಸಭೆಯಲ್ಲಿ ನಡೆದ ಶಾಸಕಾಂಗ ಸಭೆಗೆ ಆರಂಭದಲ್ಲಿ ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಆಗಮಿಸಿರಲಿಲ್ಲ. ತಮ್ಮ ನಿರೀಕ್ಷಿತ ಶಾಸಕರೆಲ್ಲಾ ಬರ್ತಾರೋ ಇಲ್ವೋ ಎಂಬ ಆತಂಕದಲ್ಲೇ ಎಲ್ಲಾ ನಾಯಕರು ಇದ್ದರು. ಇದೇ ವೇಳೆ ಸಭೆಗೆ ಬಂದ ಶಾಸಕರ ದೃಶ್ಯಾವಳಿಗಳನ್ನು ಚಿತ್ರೀಕರಿಸಲು ಕೊಠಡಿಯೊಳಗೆ ಮಾಧ್ಯಮಗಳಿಗೆ ಪ್ರವೇಶ ನೀಡಲಾಯಿತು.

ಮಾಧ್ಯಮ ಪ್ರತಿನಿಧಿಗಳು ವೀಡಿಯೋ ಶೂಟ್ ಮಾಡುತ್ತಿದ್ದ ವೇಳೆಯಲ್ಲಿಯೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರು ತಮ್ಮದೇ ಜಿಲ್ಲೆಯವರಾದ ಬಸವಕಲ್ಯಾಣ ಶಾಸಕರಾದ ನಾರಾಯಣ ರಾವ್ ಅವರಿಗೆ ಫೋನ್ ಮಾಡಿದ್ದಾರೆ. ಈ ವೇಳೆ ಖಂಡ್ರೆಯವರು ಸಿದ್ದರಾಮಯ್ಯ ಅವರಿಗೆ ಫೋನ್ ನೀಡಿದ್ದಾರೆ. ಫೋನ್ ಕೈಗೆತ್ತಿಕೊಂಡ ಸಿದ್ದರಾಮಯ್ಯನವರು ತಮ್ಮ ಎಂದಿನ ಶೈಲಿಯಲ್ಲಿ, ಹಲೋ…… ನಾರಾಯಣರಾವ್ ಎಲ್ಲಿದ್ದೀಯಾ, ಆ….. ಜಲ್ದಿ ಬಂದ್ಬಿಡು, ಜಲ್ದಿ ಬಂದ್ಬಿಡು ಎಂದು ಹೇಳಿದ್ದಾರೆ.

ಸರ್, ಹೈದ್ರಾಬಾದ್‍ನಿಂದ ಬರೋದು ಲೇಟಾಯ್ತು. ಈಗ ಬೆಂಗಳೂರು ಏರ್ ಪೋರ್ಟ್‍ಗೆ ಬಂದಿದ್ದೇನೆ. ಬರ್ತಿದ್ದೇನೆ ಸರ್ ಎಂದು ಸಿದ್ದರಾಮಯ್ಯ ಅವರಿಗೆ ಉತ್ತರಿಸಿದರು. ಅಷ್ಟೊತ್ತಿಗಾಗಲೇ ನಾರಾಯಣರಾವ್ ಅವರು ಹೈದರಾಬಾದ್‍ನಿಂದ ವಿಮಾನದಲ್ಲಿ ಆಗಮಿಸಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಕೆಳಗಿಳಿದು ವಿಧಾನಸೌಧ ತಲುಪಬೇಕು ಅನ್ನೋ ಧಾವಂತದಲ್ಲಿ ಹೊರಬರುತ್ತಿದ್ದರು.

ಈ ವೇಳೆ ಅಲ್ಲಿಯೂ ಮಾಧ್ಯಮ ಪ್ರತಿನಿಧಿಗಳು ಹಾಜರಿದ್ದರು. ಸಿದ್ದರಾಮಯ್ಯ ಫೋನ್ ಕಾಲ್ ರಿಸೀವ್ ಮಾಡಿದ ನಾರಾಯಣರಾವ್ ಅವರು, ಓಡೋಡುತ್ತಾ ಬಂದು ಕೆಂಪು ಬಣ್ಣದ ಕಾರು ಹತ್ತಿ ಏರ್ ಪೋರ್ಟಿಂದ ಹೊರಟೇ ಬಿಟ್ರು. ಈ ವೇಳೆ ಅವರ ಜೊತೆ ಬಂದಿದ್ದವರಲ್ಲಿ ಯಾಕೆ ಲೇಟ್ ಎಂದು ಕೇಳಿದಾಗ, ವಿಮಾನ ಬರುವುದು ವಿಳಂಬವಾಯಿತು ಎಂಬ ಸ್ಪಷ್ಟನೆ ನೀಡಿದರು.

ಹೆಬ್ಬಾರ್ ಇವ್ರೇ…!: ಅತೃಪ್ತ ಬಣದಲ್ಲಿದ್ದಾರೆ ಎಂಬ ಗುಮಾನಿಯಲ್ಲೇ ಇದ್ದ ಶಿವರಾಮ್ ಹೆಬ್ಬಾರ್ ಅವರು ಕೂಡಾ ಇಂದಿನ ಸಭೆಗೆ ಆಗಮಿಸಿದ್ದರು. ಅವರ ಬಳಿ ಹೋಗ್ತಿದ್ದಂತೆ ಅವರ ಅಕ್ಕಪಕ್ಕದಲ್ಲಿ ಕುಳಿತಿದ್ದ ಶಾಸಕರು, ನೋಡ್ರಪ್ಪಾ ಇಲ್ಲಿ…. ಹೆಬ್ಬಾರ್ ಇವ್ರೇ… ಅಂತಾ ಬೆರಳು ತೋರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *