ಮೈಸೂರು: ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂಸ್ಕøತಿಕ ನಗರಿ ಮೈಸೂರಿಗೆ ಆಗಮಿಸಿದ್ದಾರೆ.
ಸದ್ಯ ತಮ್ಮ ನಿವಾಸದಲ್ಲಿ ಬೀಡುಬಿಟ್ಟಿರುವ ಸಿದ್ದರಾಮಯ್ಯ, ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ ಸಿದ್ದರಾಮಯ್ಯರನ್ನು ನೋಡಲು ಕೇವಲ ಬೆರಳಣಿಕೆಯಷ್ಟು ಮಂದಿ ಬಂದಿದ್ದಾರೆ. ಈ ಹಿಂದೆ ಸಿಎಂ ಆಗಿದ್ದಾಗ ಅವರ ಮನೆ ಬಳಿ ನೂರಾರು ಜನ ಜಮಾಯಿಸುತ್ತಿದ್ದರು. ಆದರೆ ಇದೀಗ ಆ ಪರಿಸ್ಥಿತಿ ಇಲ್ಲ.
ಇನ್ನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ಕೊಡೋದು ಅನುಮಾನ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯ ಫಲಿತಾಂಶದ ಹಿಂದಿನ ದಿನ ಮೈಸೂರಿಗೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಸೋಲಿನ ಬಳಿಕ ಇತ್ತ ಮುಖ ಮಾಡಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಿಂದ ಸೋತು ಮುಜುಗರಕ್ಕೆ ಒಳಗಾಗಿದ್ದ ಸಿದ್ದರಾಮಯ್ಯ ಮೈಸೂರಿಗೆ ಬರಲು ಮುಂದಾಗಿರಲಿಲ್ಲ.
ಇಂದು ಮುಸ್ಲಿಂ ಭಾಂದವರಿಗಾಗಿ ರಂಜಾನ್ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರಿಂದ ಇಫ್ತಾರ್ ಕೂಟ ಆಯೋಜಿಸಲಾಗಿದೆ. ಮೈಸೂರಿನ ಬನ್ನಿಮಂಟಪದ ಮಿಲನ್ ಫಂಕ್ಷನ್ ಹಾಲ್ ನಲ್ಲಿ ಇಂದು ಸಂಜೆ 6:30ಕ್ಕೆ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿದೆ. ಸಿದ್ದರಾಮಯ್ಯ ಪ್ರತಿ ವರ್ಷ ಮೈಸೂರಿನಲ್ಲಿ ಇಫ್ತಾರ್ ಕೂಟ ಆಯೋಜಿಸುತ್ತಾರೆ. ಕರ್ನಾಟಕ ಸರ್ಕಾರದ ಲೆಟರ್ ಹೆಡ್ ನಲ್ಲೇ ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗಿದೆ. ಆಂಗ್ಲ ಭಾಷೆಯಲ್ಲಿ ಆಹ್ವಾನ ಪತ್ರಿಕೆ ಇದ್ದು, ಆಹ್ವಾನ ಪತ್ರಿಕೆ ಮೂಲಕ ಇಫ್ತಾರ್ ಕೂಟಕ್ಕೆ ಮುಸ್ಲಿಂ ಭಾಂದವರನ್ನು ಆಹ್ವಾನಿಸಲಾಗಿದೆ.
ಇಂದು ಮೈಸೂರಿನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ತಂಗಲಿದ್ದು, ನಾಳೆ ಬೆಳಗ್ಗೆ ಸುಮಾರು 9.30 ಕ್ಕೆ ಖಾಸಗಿ ಹೋಟೆಲ್ ನಲ್ಲಿ ಮೈಸೂರು – ಚಾಮರಾಜನಗರ ಜಿಲ್ಲೆಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಜೊತೆ ಸಭೆ ನಡೆಸಲಿದ್ದಾರೆ. ಗೆದ್ದವರು ಮತ್ತು ಸೋತವರು ಜೊತೆ ಆತ್ಮವಲೋಕನ ಮಾಡಲಿದ್ದು, ಚಾಮುಂಡೇಶ್ವರಿ ಕ್ಷೇತ್ರದ ತಮ್ಮ ಸೋಲಿನ ಬಗ್ಗೆಯೂ ನಾಳೆಯೇ ಚರ್ಚೆ ನಡೆಯಲಿದೆ.