ಜೆಡಿಎಸ್ ಸೋಲಿಸಿ ಬಿಜೆಪಿ ಗೆಲ್ಲಿಸೋದೇ ಸಿದ್ದು & ಟೀಂನ ಉದ್ದೇಶ: ಹೆಚ್‍ಡಿಕೆ ಕಿಡಿ

Public TV
2 Min Read

ಮೈಸೂರು: ರಾಜ್ಯದ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ ಪರಸ್ಪರ ಗಧಾಪ್ರಹಾರ ನಡೆಸುತ್ತಿದ್ದಾರೆ. ಇದೇ ವೇಳೆ ಮೈಸೂರಿನಲ್ಲಿ ಸಿದ್ದು ವಿರುದ್ಧ ಎಚ್‍ಡಿಕೆ ಮತ್ತೆ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅಂಡ್ ಟೀಂ ಸಿಂಧಗಿಯಲ್ಲಿ ಕುಳಿತಿರುವುದೇ ಜೆಡಿಎಸ್ ಸೋಲಿಸಿ ಬಿಜೆಪಿಯನ್ನು ಗೆಲ್ಲಿಸಲು. ಸಿಂದಗಿಯಲ್ಲಿ ಸ್ಪರ್ಧೆ ಇರುವುದು ಜೆಡಿಎಸ್ ಮತ್ತು ಬಿಜೆಪಿ ನಡುವೆ. ಹೀಗಿರುವಾಗ ಕಾಂಗ್ರೆಸ್‍ನವರು ಅಲ್ಲಿ ಯಾಕೆ ಬೀಡು ಬಿಟ್ಟಿದ್ದಾರೆ? ಜೆಡಿಎಸ್ ಸೋಲಿಸಿ ಬಿಜೆಪಿ ಗೆಲ್ಲಿಸುವುದು ಅವರ ಉದ್ದೇಶ ಎಂದು ಹೆಚ್‍ಡಿಕೆ ಟೀಕಿಸಿದರು.

ಸಿದ್ದರಾಮಯ್ಯ ಪ್ರತಿ ಸಭೆಯಲ್ಲೂ ನನ್ನ ವಿರುದ್ಧ ‘ಹೊಲ ಉಳುಮೆ ಮಾಡಿದ್ದಾನೆಯೇ’ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ನಿಜವಾದ ರೈತ ನಾನು, ನಾವು ಕುರಿ ಮಂದೆಯ ನಡುವೆ ಊಟ ಮಾಡಿ ಮಲಗಿದ್ದೇನೆ. ನಾನು ಕೃಷಿಕನೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಿಡದಿ ತೋಟಕ್ಕೆ ಬಂದು ನೋಡಲಿ. ಆದರೆ ಸಿದ್ದರಾಮಯ್ಯ ಎಲ್ಲಿ ಹೊಲ ಉಳುಮೆ ಮಾಡಿದ್ದಾರೆ? ಅವರದ್ದು ಒಂದು ಫಾರ್ಮ್ ಹೌಸ್ ಇದ್ಯಲ್ಲ, ಏನ್ ಬಿತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ. ಜಾತಿ ಜಾತಿಗಳನ್ನೇ ಒಡೆದರು. ಈಗ ಸಿಂದಗಿ, ಹಾನಗಲ್‍ನಲ್ಲಿ ಜಾತಿವಾರು ಸಭೆಗಳನ್ನು ಮಾಡುತ್ತಿದ್ದಾರೆ. ಜಾತ್ಯಾತೀತರಾಗಿದ್ದರೆ ಇವರು ಜಾತಿವಾರು ಸಭೆ ಯಾಕೆ ನಡೆಸುತ್ತಿದ್ದರು? ಇವರೆಂಥಾ ಜಾತ್ಯಾತೀತವಾದಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಯುಪಿ ಜನತೆಗೆ 10 ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ – ಪ್ರಿಯಾಂಕಾ ಗಾಂಧಿ ಭರವಸೆ

ಬ್ರದರ್.. ಬ್ರದರ್ ಎನ್ನುತ್ತಾ ಮುಸಲ್ಮಾನರ ಕತ್ತು ಕೊಯ್ತಾರೆ ಎಂಬ ಜಮೀರ್ ಆರೋಪದ ಕುರಿತು ಪ್ರತಿಕ್ರಿಯಿಸಿ, ಫಾರೂಕ್‍ರನ್ನು ಚುನಾವಣೆಗೆ ನಿಲ್ಲಿಸಿ ಕತ್ತು ಕುಯ್ದಿದ್ದು ಯಾರು? ಫಾರೂಕ್ ವಿರುದ್ಧ ರಾಮಸ್ವಾಮಿಗೆ ವೋಟು ಹಾಕಿದ್ದು ಯಾರು? ಇವರಿಂದ ಮುಸಲ್ಮಾನರು ಉದ್ದಾರ ಆಗಿದ್ದಾರ. ಹೋಗಲಿ, ರಾಮಸ್ವಾಮಿಯವರನ್ನಾದರೂ ಉಳಿಸಿಕೊಂಡಿದ್ದಾರಾ? ಇವರಿಂದ ನಾವು ಕಲಿಯುವುದು ಏನಿಲ್ಲ. ಇವರೆಲ್ಲಾ ಚುನಾವಣೆಯುದ್ದಕ್ಕೂ ಹೀಗೆ ಮಾತನಾಡಲಿ. ನನಗೆ ಒಳ್ಳೆಯದು, ನಾನು ಅದನ್ನೇ ಆಶಿಸುತ್ತೇನೆ ಎಂದು ಎಚ್‍ಡಿಕೆ ಕುಟುಕಿದರು. ಇದನ್ನೂ ಓದಿ: ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಪೊಲೀಸರಿಂದ ನೋಟಿಸ್

Share This Article
Leave a Comment

Leave a Reply

Your email address will not be published. Required fields are marked *