ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಬೆಂಬಲಿಸಿದ ನಿವೃತ್ತ ಸಿಜೆಐ ಚಂದ್ರಚೂಡ್‌

Public TV
2 Min Read

ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court) ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ (Ex-CJI Chandrachud) ಅವರು ಒಂದು ರಾಷ್ಟ್ರ, ಒಂದು ಚುನಾವಣೆಯ (One Nation, One Election) ಪರವಾಗಿ ಅಭಿಪ್ರಾಯ ಮಂಡಿಸಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ವಿವರವಾದ ಟಿಪ್ಪಣಿಯನ್ನು ಸಂಸದೀಯ ಸಮಿತಿಗೆ ಡಿ.ವೈ. ಚಂದ್ರಚೂಡ್ ಸಲ್ಲಿಸಿದ್ದಾರೆ. ಇದರಲ್ಲಿ ಅವರು ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಿದರೆ ಸಂವಿಧಾನ ಮೂಲ ರಚನೆಯ ಸಿದ್ಧಾಂತವನ್ನು ಉಲ್ಲಂಘಿಸುತ್ತದೆ ಎಂಬ ವಾದಗಳನ್ನು ತಳ್ಳಿಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದು ರಾಷ್ಟ್ರ, ಒಂದು ಚುನಾವಣೆಯ ಪರವಾಗಿ ಮಾತನಾಡಿದರೂ ಲೋಕಸಭೆಯಲ್ಲಿ ಮಂಡಿಸಲಾದ ಮಸೂದೆಗಳಲ್ಲಿ ಚುನಾವಣಾ ಆಯೋಗಕ್ಕೆ ನೀಡಲಾದ ಅನಿರ್ದಿಷ್ಟ ಮತ್ತು ವ್ಯಾಪಕ ಅಧಿಕಾರಗಳನ್ನು ಅವರು ವಿರೋಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಜೀವನ ತುಂಬಾ ಆಕರ್ಷಕ: ವರ್ಗಾವಣೆ ವಿರೋಧಿಸಿ ವೈದ್ಯರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

ನಿವೃತ್ತ ನ್ಯಾ. ಚಂದ್ರಚೂಡ್, ಮಾಜಿ ಮುಖ್ಯ ನ್ಯಾ.ಜೆ ಕೆಹರ್ ಮತ್ತು ಮಾಜಿ ಸಚಿವರಾದ ಎಂ ವೀರಪ್ಪ ಮೊಯ್ಲಿ ಮತ್ತು ಇ ಎಂ ಸುದರ್ಶನ ನಾಚಿಯಪ್ಪನ್ ಅವರನ್ನು ಒಂದು ದೇಶ ಒಂದು ಚುನಾವಣೆ ಸಂಬಂಧ ರಚನೆಯಾಗಿರುವ ಜಂಟಿ ಸಂಸದೀಯ ಸಮಿತಿ ಜುಲೈ 11 ರಂದು ಸಂವಾದಕ್ಕೆ ಆಹ್ವಾನಿಸಿದೆ.

ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಸಂವಿಧಾನದ ಮೂಲ ಲಕ್ಷಣವಾಗಿದೆ. ಹಾಗೆಂದ ಮಾತ್ರಕ್ಕೆ ಏಕಕಾಲದಲ್ಲಿ ಚುನಾವಣೆ ನಡೆಸದಿದ್ದರೆ ಮಾತ್ರ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯುತ್ತದೆ ಎಂದು ಹೇಳಲು ಬರುವುದಿಲ್ಲ ಎಂಬ ಅಭಿಪ್ರಾಯವನ್ನು ನಿವೃತ್ತ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿದ್ದ ಮಾತ್ರಕ್ಕೆ ವಿನಾಯ್ತಿ ಇಲ್ಲ: ಪತ್ನಿ ಕೊಂದಿದ್ದ ಕಮಾಂಡೋಗೆ ಸುಪ್ರೀಂ ತರಾಟೆ

ಭಾರತೀಯ ಮತದಾರರು ಮುಗ್ಧರು. ಅವರನ್ನು ಸುಲಭವಾಗಿ ಹೇಗೆ ಬೇಕಾದರೂ ಪ್ರಭಾವಿಸಬಹುದು ಎಂಬ ವಾದವನ್ನು ಒಂದು ರಾಷ್ಟ್ರ, ಒಂದು ಚುನಾವಣೆಯನ್ನು ವಿರೋಧಿಸುವವರು ಮುಂದಿಡುತ್ತಾರೆ. ಆದರೆ ಸಾರ್ವತ್ರಿಕ ವಯಸ್ಕ ಮತದಾನವು ಸಾಂವಿಧಾನಿಕ ಬದ್ಧತೆಯಾಗಿದೆ. ಪರಿಶೀಲಿಸದ ಊಹೆಯ ಆಧಾರದಲ್ಲಿ ಸಾಂವಿಧಾನಿಕ ಚೌಕಟ್ಟನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳಲ್ಲಿ ಜನರು ವಿಭಿನ್ನವಾಗಿ ಮತ ಚಲಾಯಿಸುತ್ತಾರೆ ಎಂಬ ಸಲಹೆಗಳನ್ನು ತಳ್ಳಿಹಾಕಿದ ಅವರು, ಜನರು ತಮ್ಮ ಸ್ಥಳೀಯ ಮತ್ತು ರಾಜ್ಯ ಹಿತಾಸಕ್ತಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಬೇಕೆಂದಿದ್ದರೆ ಸ್ಥಳೀಯ ವಿಷಯಗಳ ಮೇಲೆ ರಾಷ್ಟ್ರೀಯ ಚುನಾವಣೆಗೆ ಮತ ಚಲಾಯಿಸಬಹುದಲ್ಲವೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

 

Share This Article