ಸ್ನೇಹಿತನ ಪತ್ನಿಯ ಮೇಲೆ ರೇಪ್ ಕೇಸ್: ಮಾಜಿ ಸಚಿವ ಹಾಲಪ್ಪ ಖುಲಾಸೆ

Public TV
2 Min Read

ಶಿವಮೊಗ್ಗ: ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಮಾಜಿ ಸಚಿವ ಹರತಾಳು ಹಾಲಪ್ಪಗೆ ಬಿಗ್ ರಿಲೀಫ್ ಸಿಕ್ಕಿದ್ದು, ಪ್ರಕರಣದಿಂದ ದೋಷಮುಕ್ತರಾಗಿದ್ದಾರೆ.

ಶಿವಮೊಗ್ಗ 2ನೇ ಜೆಎಂಎಫ್‍ಸಿ ನ್ಯಾಯಾಲಯ ನ್ಯಾ. ಬಿಜೆ ರಾಮ ಅವರು ಹಾಲಪ್ಪ ಅವರನ್ನು ಪ್ರಕರಣದಿಂದ ಖುಲಾಸೆ ಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ. ತೀರ್ಪು ಪ್ರಕಟವಾಗುವ ವೇಳೆ ಹಾಲಪ್ಪ ಅವರು ಕೋರ್ಟ್ ನಲ್ಲಿ ಹಾಜರಾಗಿದ್ದರು. ಹಾಲಪ್ಪ ಅವರ ಬೆಂಬಲಿಗರು ಕೋರ್ಟ್ ನಲ್ಲಿ ಜಮಾಯಿಸಿದ್ದರು.

ಕೋರ್ಟ್ ಆಗಸ್ಟ್ 8 ರಂದು ವಿಚಾರಣೆ ಪೂರ್ಣಗೊಳಿಸಿ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. 2009ರ ನವೆಂಬರ್‍ನಲ್ಲಿ ಘಟನೆ ನಡೆದಿದ್ದು ಸಿಐಡಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ 2009ರ ನವೆಂಬರ್ 27ರಂದು ರಾತ್ರಿ ಹಾಲಪ್ಪ ತನ್ನ ಗೆಳೆಯ ವೆಂಕಟೇಶಮೂರ್ತಿಯ ಪತ್ನಿ ಚಂದ್ರಾವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಉಲ್ಲೇಖಿಸಿತ್ತು. ಐಪಿಸಿ ಸೆಕ್ಷನ್ 376ರ ಅನ್ವಯ ಆರೋಪ ಪಟ್ಟಿಯನ್ನು ಬೆಂಗಳೂರು ಸಿಐಡಿ ಪತ್ತೆ ನಿರೀಕ್ಷಕ ಎಂ.ಎಸ್.ಕೌಲಪುರೆ ಅವರು ಸಲ್ಲಿಸಿದ್ದರು.

ರಾಜ್ಯದಾದ್ಯಂತ ತೀವ್ರ ವಿರೋಧ ಕಂಡು ಬಂದ ಹಿನ್ನಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿತ್ತು. ದೂರು ದಾಖಲಾದ ಆರು ದಿನದ ನಂತರ ಹಾಲಪ್ಪ ಶಿವಮೊಗ್ಗದಲ್ಲಿ ಪೊಲೀಸರಿಗೆ ಶರಣಾಗಿದ್ದರು. ನಂತರ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಈ ಹೈ ಪ್ರೊಫೈಲ್ ಕೇಸ್ ಬಗ್ಗೆ ಸಿಐಡಿ ಡಿಐಜಿ ಚರಣ್ ರೆಡ್ಡಿ ತನಿಖೆಯ ನೇತೃತ್ವ ವಹಿಸಿದ್ದರು. 2011ರ ಆಗಸ್ಟ್ ನಲ್ಲಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಐಪಿಸಿ ಸೆಕ್ಷೆನ್ 376(ಅತ್ಯಾಚಾರ), 506(ಬೆದರಿಕೆ), 341(ಅಕ್ರಮವಾಗಿ ಕೂಡಿ ಹಾಕುವುದು), 34 (ನಿರ್ದಿಷ್ಟ ಉದ್ದೇಶದ ಅಪರಾಧ) ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಶಿವಮೊಗ್ಗದ 12 ಜನ ಸೇರಿ ಒಟ್ಟು 32 ಜನ ಸಾಕ್ಷಿಗಳನ್ನು ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ತಜ್ಞರು, ಮಹಜರು ಸಾಕ್ಷಿಗಳು, ಅಡಿಯೋ-ವಿಡಿಯೋ ತಜ್ಞರು, ಪೊಲೀಸ್ ಅಧಿಕಾರಿಗಳು, ಗನ್ ಮ್ಯಾನ್‍ಗಳು, ಐಬಿಯಲ್ಲಿದ್ದ ಸಿಬ್ಬಂದಿ ಇನ್ನಿತರರು ಪ್ರಕರಣದ ಸಾಕ್ಷಿಗಳಾಗಿದ್ದರು. ಮುಖ್ಯವಾದ ಅಂಶವೆಂದರೆ ಈ ಪ್ರಕರಣದಲ್ಲಿ ಚಂದ್ರಾವತಿ ಅವರ ಪತಿ ವೆಂಕಟೇಶ್ ಅತ್ಯಾಚಾರದ ಬಗ್ಗೆ ಮೊಬೈಲ್‍ನಲ್ಲಿ ಮಾಡಿದ್ದ ವಿಡಿಯೋವನ್ನು ನ್ಯಾಯಾಲಯ ಸಾಕ್ಷ್ಯವನ್ನಾಗಿ ಪರಿಗಣಿಸಿರಲಿಲ್ಲ.

ಇಂದಿನ ತೀರ್ಪು ಹರತಾಳು ಹಾಲಪ್ಪ ಅವರ ರಾಜಕೀಯ ಭವಿಷ್ಯವನ್ನ ನಿರ್ಧರಿಸಲಿದೆ. ಮುಖ್ಯವಾಗಿ ಈ ಪ್ರಕರಣದ ನಂತರ ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದ ಹಾಲಪ್ಪ ಅವರಿಗೆ ಈ ತೀರ್ಪು ರಾಜಕೀಯ ಮರುಜನ್ಮ ನೀಡುತ್ತೋ ಎಂಬುದನ್ನು ಕಾದು ನೋಡಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *