ಈ ಕಾರಣಕ್ಕೆ ಭಾರತಕ್ಕೆ ಡಾನ್ ದಾವೂದ್ ಬರೋದೇ ಇಲ್ವಂತೆ

Public TV
1 Min Read

ಮುಂಬೈ: ಭೂಗತ ಪಾತಕಿ, ಮುಂಬೈ ಸರಣಿ ಬಾಂಬ್ ಸ್ಫೋಟದ ಸಂಚುಕೋರ ದಾವೂದ್ ಇಬ್ರಾಹಿಂ ಭಾರತಕ್ಕೆ ಹಿಂದಿರುಗಿ ಬರುವ ಸಾಧ್ಯತೆ ಇಲ್ಲ ಎಂದು ಮುಂಬೈನ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದಾವೂದ್ ಪ್ರಮುಖ ಆರೋಪಿಯಾಗಿರುವ 1993 ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸುಮಾರು 227 ಜನರು ದಾರಣವಾಗಿ ಸಾವನ್ನಪ್ಪಿದ್ದರು. ಜೊತೆಗೆ 713 ಜನ ಗಂಭೀರವಾಗಿ ಗಾಯಗೊಂಡಿದ್ದರು. ಅಷ್ಟೇ ಅಲ್ಲದೇ ಸುಮಾರು 27 ಕೋಟಿ. ರೂ ನಷ್ಟವಾಗಿತ್ತು.

 

ಮಾಜಿ ಪೊಲೀಸ್ ಆಯುಕ್ತರಾದ ಎಂಎನ್ ಸಿಂಗ್ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿ, ನಾವು ಅವನು ಮಾಡಿರುವ ಅಪರಾಧಗಳನ್ನು ಮರೆತುಬಿಡಬೇಕು ಎಂದು ಹೇಳುತ್ತಿಲ್ಲ. ಆದರೆ ಅವನು ಭಾರತಕ್ಕೆ ಹಿಂದಿರುಗುವುದಿಲ್ಲ. ಇದಕ್ಕೆ ಪಾಕಿಸ್ತಾನ ಅವಕಾಶ ಮಾಡಿ ಕೊಡಲ್ಲ. ಒಂದು ವೇಳೆ ದಾವೂದ್ ಅಲ್ಲಿಂದ ಭಾರತಕ್ಕೆ ಬರಲು ಯತ್ನಿಸಿದರೆ ಆತನನ್ನು ಕೊಂದೇ ಬಿಡುತ್ತಾರೆ. ಆತ ಈಗ ಪಾಕಿಸ್ತಾನದ ಐಎಸ್‍ಐನ ವಶದಲ್ಲಿದ್ದಾನೆ ಎಂದು ಹೇಳಿದ್ದಾರೆ.

ಪ್ರಸ್ತುತ ಮುಂಬೈ ನಗರ ಮತ್ತು ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ದಾವೂದ್ ಭಯ ಕಡಿಮೆಯಾಗಿದೆ. ಇಂತಹ ಗ್ಯಾಂಗ್‍ಗಳಿಗೆ ಸ್ಥಳೀಯ ರಾಜಕಾರಣಿಗಳು ಹಾಗೂ ಪೊಲೀಸರ ಬೆಂಬಲವಿರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬಾಂಬ್ ಸ್ಫೋಟದ ಕೇಸ್ ತನಿಖೆ ಮಾಡುವ ಸಂದರ್ಭದಲ್ಲಿ ಇಬ್ಬರು ಪೊಲೀಸರಿಗೆ ದಾವೂದ್ ಜೊತೆ ಲಿಂಕ್ ಇರೋದು ನನಗೆ ಗೊತ್ತಾಗಿತ್ತು ಎಂಬುದನ್ನ ನಾನು ಒಪ್ಪಿಕೊಳ್ಳುತ್ತೇನೆ. ನಂತರ ಆ ಪೊಲೀಸರನ್ನು ವಜಾ ಮಾಡಲಾಯಿತು. ಇದೊಂದು ದುರದೃಷ್ಟಕರವಾದ ಸಂಗತಿ ಎಂದು ಸಿಂಗ್ ಹೇಳಿದರು.

1993 ರ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಸಿಂಗ್ ಜಂಟಿ ಆಯುಕ್ತರಾಗಿ ವಿಶೇಷ ತನಿಖಾ ತಂಡದ ನೇತೃತ್ವವನ್ನು ವಹಿಸಿಕೊಂಡಿದ್ದರು. ಇತ್ತ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್‍ನನ್ನು ತನಿಖೆ ಮಾಡುತ್ತಿರುವ ಥಾಣೆಯ ಪೊಲೀಸ್ ಆಯುಕ್ತರಾದ ಪರಮ್ ಬೀರ್ ಸಿಂಗ್ ಮಾತನಾಡಿ, ಥಾಣೆಯ ಸ್ಥಳೀಯ ಕಾರ್ಪೋರೇಟರ್‍ಗಳೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಅನುಮಾನವಿದೆ ಎಂದಿದ್ದಾರೆ. ಕಳೆದ ತಿಂಗಳು ಬಿಲ್ಡರ್‍ವೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸುಲಿಗೆ ಆರೋಪದಡಿ ಕಸ್ಕರ್‍ನನ್ನು ಬಂಧಿಸಲಾಗಿತ್ತು.

 

Share This Article
Leave a Comment

Leave a Reply

Your email address will not be published. Required fields are marked *