ಬೆಂಗಳೂರು: ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸಚಿವ ಶಂಕರ್ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ದಿಢೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ್ದಾರೆ.
ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಜೈವಿಕ ಉದ್ಯಾನವನದ ಮುಖ್ಯ ನಿರ್ವಹಣಾಧಿಕಾರಿ ಗೋಕುಲ್ ಗೈರು ಹಾಜರಾಗಿದ್ದು, ಡಿ.ಡಿ. ಕುಶಾಲಪ್ಪಗೆ ಸಚಿವರು ತರಾಟೆ ತೆಗೆದುಕೊಂಡಿದ್ದರು. ಇದೇ ಸಂದರ್ಭದಲ್ಲಿ ತಮ್ಮ ಭೇಟಿಯ ನೆನಪಿಗಾಗಿ ಬೇವಿನ ಗಿಡವನ್ನು ನೆಟ್ಟಿದ್ದಾರೆ. ಮೃಗಾಲಯಕ್ಕೆ ಭೇಟಿಕೊಟ್ಟ ಸಚಿವರು ಪ್ರವಾಸಿಗರಲ್ಲಿ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದ ಸಚಿವರು ಮತ್ತಷ್ಟು ಸೌಲಭ್ಯಗಳ ಬಗ್ಗೆ ಪ್ರವಾಸಿಗರ ಬಳಿ ಕೇಳಿ ತಿಳಿದು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಸಚಿವರು ಸಸ್ಯಾಹಾರಿ, ಮಾಂಸಾಹಾರಿ ಸಫಾರಿ ಹಾಗೂ ಚಿಟ್ಟೆ ಪಾರ್ಕ್ ಗೆ ಭೇಟಿಕೊಟ್ಟು ಪ್ರಾಣಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಆನೆ ಸಫಾರಿಯಲ್ಲಿ ಆನೆಯ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು. ಇನ್ನು ಸಫಾರಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಗುಣಮಟ್ಟವನ್ನು ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಉದ್ಯಾನವನದಲ್ಲಿ ಹೆಚ್ಚಿನ ಬಯಲು ಪ್ರದೇಶ ಇದ್ದು, ಅಲ್ಲಿ ಮರಗಳನ್ನು ಬೆಳೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಜೊತೆಗೆ ಮೃಗಾಲಯ ಹಾಗೂ ಸಫಾರಿಗಳ ಮುಖ್ಯದ್ವಾರದ ಬಳಿ ಉದ್ಯಾನವನ ಹಾಗೂ ಕಿರು ಜಲಪಾತಗಳು ಸೃಷ್ಟಿಸಿ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸುವಂತೆ ತಿಳಿಸಿದ್ದೇವೆ. ಬಹಳ ವರ್ಷಗಳಿಂದ ಇಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಖಾಯಂಗೊಳಿಸುವುದಾಗಿ ತಿಳಿಸಿದರು.