ವಿಧಾನಸಭೆ ಚುನಾವಣೆ ಗೆಲ್ಲಲು ಸರ್ಕಾರದಿಂದ ಖಾಕಿ ಅಧಿಕಾರ ದುರ್ಬಳಕೆ?

Public TV
1 Min Read

ಬೆಂಗಳೂರು: ಬಿಜೆಪಿಯ ಪರಿವರ್ತನಾ ಯಾತ್ರೆಗೆ ಬ್ರೇಕ್ ಹಾಕಲು ಮೊದಲ ದಿನವೇ ಐಪಿಎಸ್ ಅಧಿಕಾರಿಗಳ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಪೊಲೀಸರಿಗೆ ಮತ್ತೊಂದು ಕೆಲಸ ನೀಡಿದ್ದಾರೆ ಎನ್ನುವ ವಿಚಾರ ಲಭ್ಯವಾಗಿದೆ.

ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಲೀಡರ್‍ಗಳನ್ನು ಫಾಲೋ ಮಾಡಿ ಡೀಟೈಲ್ಸ್ ಕೊಡಿ ಎಂದು ಪೊಲೀಸರಿಗೆ ಮೌಖಿಕ ಸೂಚನೆ ನೀಡಲಾಗಿದೆ. ಏರಿಯಾದ ನಾಯಕ ಯಾರು, ಅವರ ಸಾಮರ್ಥ್ಯ ಏನು? ಎಷ್ಟು ಜನ ಅಭಿಮಾನಿಗಳು ಇದ್ದಾರೆ ಈ ವಿಚಾರವನ್ನು ತಿಳಿಸಬೇಕು ಎಂದು ಸೂಚಿಸಿದ್ದಾರೆ ಎನ್ನವ ವಿಚಾರ ಮೂಲಗಳಿಂದ ಸಿಕ್ಕಿದೆ.

ಇಷ್ಟೇ ಅಲ್ಲದೇ ನಾಯಕ ಮೊಬೈಲ್ ಫೋನ್ ನಂಬರ್‍ಗಳನ್ನು ಸಂಗ್ರಹ ಮಾಡಿ, ಎಷ್ಟು ಹಣ ಕೊಟ್ಟರೆ ಅವರು ಪಕ್ಷಾಂತರ ಮಾಡುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ ನವೆಂಬರ್ 2 ರಂದು ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ್ದರು. ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಎಸ್‍ಪಿ, ಪೊಲೀಸ್ ಆಯುಕ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಭೆಯಲ್ಲಿ ಸಿಎಂ ಬರೀ ಪರಿವರ್ತನಾ ರ್ಯಾಲಿಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಪರಿವರ್ತನಾ ರ್ಯಾಲಿ ಯಾವ ರೀತಿ ನಡೆಯುತ್ತೆ? ಎಲ್ಲೆಲ್ಲಿ ಏನೇನಾಗುತ್ತೆ ಎಂಬುದರ ಬಗ್ಗೆ ಇಂಚಿಚು ಮಾಹಿತಿ ನೀಡಬೇಕು. ಯಾತ್ರೆವೇಳೆ ಎಲ್ಲಿಯಾದರೂ ಉದ್ಧಟತನ ಮಾಡಿದ್ರೆ ಮುಲಾಜಿಲ್ಲದೆ ಅವರ ವಿರುದ್ಧ ಕೇಸ್ ಗಳನ್ನು ಹಾಕಬೇಕು. ಪರಿವರ್ತನಾ ಯಾತ್ರೆಯ ಅಲೆ ಹೇಗಿದೆ? ಅದಕ್ಕೆ ಎಷ್ಟು ಜನ ಸೇರಿದ್ರು, ಎಂಬುದರ ಬಗ್ಗೆ ಸಂಪೂರ್ಣ ವರದಿ ನೀಡಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಸಾಧ್ಯವಾದರೆ ಪರಿವರ್ತನಾ ಯಾತ್ರೆಗೆ ಅಡ್ಡಗಾಲು ಹಾಕಿ, ಭಯಪಡುವ ಅಗತ್ಯ ಇಲ್ಲ. ಸೂಕ್ಷ ಪ್ರದೇಶಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡುವವರು ಯಾರಾದರೂ ಬಂದರೆ ಅವರನ್ನು ತಡೆಯಿರಿ. ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ತಿಳಿದರೆ ತಕ್ಷಣ ನಿಷೇಧಾಜ್ಞೆ ಜಾರಿ ಮಾಡಿ. ನಿಷೇಧಾಜ್ಞೆ ಜಾರಿ ಮಾಡಿದ ಪ್ರದೇಶದಲ್ಲಿ ಯಾತ್ರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *