ಬೆಂಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಅಭಿನಯಿಸೋಕೆ ಯಾರಿಗ್ ತಾನೆ ಇಷ್ಟವಿಲ್ಲ ಹೇಳಿ. ಆದರೆ ದರ್ಶನ್ಗೆ ಜೋಡಿಯಾಗುವ ಅವಕಾಶ ಬಹುಭಾಷಾ ನಟಿಯೊಬ್ಬರಿಗೆ ಒದಗಿಬಂದಿದ್ದು, ಆದರೆ ಕೊನೆ ಘಳಿಗೆಯಲ್ಲಿ ಅದು ಕೈತಪ್ಪಿ ಹೋಗಿದೆ.
ದರ್ಶನ್ ಜೊತೆ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಬಹುಭಾಷಾ ನಟಿ ಕೃತಿ ಕರಬಂಧ ತಿರಸ್ಕರಿದ್ದಾರೆ. ಕೃತಿ ಕರಬಂಧ ಈಗ ಸೌತ್ ಇಂಡಿಯಾ ಚಿತ್ರಗಳಲ್ಲಷ್ಟೆ ಅಲ್ಲದೇ ಬಾಲಿವುಡ್ನಲ್ಲೂ ಬಹುಬೇಡಿಕೆಯ ನಟಿಯಾಗಿದ್ದಾರೆ.
ಸ್ಯಾಂಡಲ್ವುಡ್ ಕೃತಿಯ ತವರೂರು. ಹೀಗಾಗೇ ಕೃತಿಗೆ ದರ್ಶನ್ ಅಭಿನಯಿಸುತ್ತಿರುವ `ಯಜಮಾನ’ ಸಿನಿಮಾದಿಂದ ಆಫರ್ ಬಂದಿತ್ತು. ಯಜಮಾನ ನಿರ್ದೇಶಕ ಪೊನ್ ಕುಮಾರ್ ಜೊತೆ ಕೃತಿ ಈ ಹಿಂದೆ ತಿರುಪತಿ ಎಕ್ಸ್ ಪ್ರೆಸ್ ಸಿನಿಮಾ ಮಾಡಿದ್ದರು. ಆದರೆ ಯಜಮಾನ ತಂಡ ನೀಡಿದ್ದ ಡೇಟ್ ಕೃತಿಗೆ ಹೊಂದಿಕೆಯಾಗಿಲ್ಲ. ಆ ವೇಳೆ ಹಿಂದಿ ಸಿನಿಮಾದಲ್ಲಿ ಬ್ಯುಸಿ ಇದ್ದರು. ಆದ್ದರಿಂದ ಯಜಮಾನ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಆದ್ರೆ ಶೀಘ್ರದಲ್ಲೇ ಒಂದೊಳ್ಳೆ ಚಿತ್ರದ ಮೂಲಕ ವಾಪಸ್ ಬರುತ್ತೀನಿ ಅಂತ ಕೃತಿ ಭರವಸೆ ನೀಡಿದ್ದಾರೆ.
ಯಜಮಾನ ಚಿತ್ರದಲ್ಲಿ ಕೃತಿ ಬದಲು ಇದೀಗ ಟಾಲಿವುಡ್ ನಟಿ ತಾನ್ಯ ಹೋಪ್ ಅಭಿನಯಿಸುತ್ತಿದ್ದಾರೆ. ಮತ್ತೊಬ್ಬ ನಟಿಯಾಗಿ ರಶ್ಮಿಕಾ ಮಂದಣ್ಣ ಇದ್ದಾರೆ.
ಮಾಸ್ತಿಗುಡಿ ಚಿತ್ರದ ನಂತರ ಕನ್ನಡದಲ್ಲಿ ಕೃತಿ ಅಭಿನಯದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಆದರೆ ಅದ್ಯಾವಾಗ “ರಾಜ್ ರೀಬೂಟ್” ಹಿಂದಿ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಜೊತೆ ಕಾಣಿಸ್ಕೊಂಡ್ರೋ ಕೃತಿಯ ಅಭಿನಯಕ್ಕೆ ಬಿಟೌನ್ ಕೂಡ ಫಿದಾ ಆಗಿದೆ. ಗೆಸ್ಟ್ ಇನ್ ಲಂಡನ್, ಶಾದಿ ಮೆ ಜರೂರ್ ಆನಾ, ವೀರ್ ಕೀ ವೆಡ್ಡಿಂಗ್ ಮತ್ತು ಕಾರ್ವಾನ್ ಹೀಗೆ ಒಂದಲ್ಲಾ ಎರಡಲ್ಲ ಸಾಲು-ಸಾಲು ಚಿತ್ರಗಳ ಜೊತೆ ಕೃತಿ ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಒಂದೊಮ್ಮೆ ಬಾಲಿವುಡ್ಗೆ ಹೋದ ಬಳಿಕ ಇದೀಗ `ದಳಪತಿ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ತೆರೆಮೇಲೆ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಕೃತಿ ಎರಡು ವರ್ಷಗಳ ಹಿಂದೆ ದಳಪತಿ ಚಿತ್ರ ಒಪ್ಪಿಕೊಂಡಿದ್ದರು. ಈ ಚಿತ್ರವನ್ನು ಪ್ರಶಾಂತ್ರಾಜ್ ನಿರ್ದೇಶನ ಮಾಡಿದ್ದು, ಪ್ರೇಮ್ ನಾಯಕರಾಗಿದ್ದಾರೆ. ಈ ಚಿತ್ರ ಏಪ್ರಿಲ್ 13ರಂದು ರಿಲೀಸ್ ಆಗುತ್ತಿದೆ.