ಮುಳುಗಡೆ ಭೀತಿಯಲ್ಲಿ ರಂಗನತಿಟ್ಟು, ಕೆಆರ್ ಎಸ್ ಉದ್ಯಾನವನಕ್ಕೆ ನಿಷೇಧ

Public TV
1 Min Read

– ವೈಮಾನಿಕ ಕ್ಯಾಮೆರಾದಲ್ಲಿ ಜೀವನದಿ ಕಾವೇರಿ ನದಿ ಸೆರೆ

ಮಂಡ್ಯ: ಅನೇಕ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳು ಭರ್ತಿಯಾಗುತ್ತಿದೆ. ಮತ್ತೊಂದೆಡೆ ಪ್ರವಾಹದ ಭೀತಿಯಿಂದ ಜನರು ಭಯಗೊಂಡಿದ್ದಾರೆ.

ಜಿಲ್ಲೆಯ ಕನ್ನಂಬಾಡಿ ಅಣೆಕಟ್ಟಿನಿಂದ ಬೃಹತ್ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ಬೃಂದಾವನ ಬೋಟಿಂಗ್ ಸ್ಥಳದಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದ್ದು, ರಂಗನತಿಟ್ಟು ಪಕ್ಷಿಧಾಮ ಮುಳುಗಡೆಯಾಗಿದೆ.

ವೈಮಾನಿಕ ಕ್ಯಾಮರಾದ ದೃಶ್ಯ

ಮಳೆಯಿಂದ ಭರ್ತಿಯಾಗಿದ್ದ ಕೆಆರ್ ಎಸ್ ಡ್ಯಾಂನಿಂದ ಕಳೆದ ಎರಡು ದಿನಗಳಿಂದ ಅಧಿಕ ಪ್ರಮಾಣದ ನೀರನ್ನು ಬಿಡಲಾಗುತ್ತಿದೆ. ಒಟ್ಟು 56,000 ಕ್ಯೂಸೆಕ್ ನೀರು ಕೆಆರ್‍ಎಸ್ ಜಲಾಶಯದಿಂದ ಹೊರ ಹೋಗುತ್ತಿದೆ. ಆದ್ದರಿಂದ ಜಲಾಶಯದ ಸುತ್ತಮುತ್ತಲಿನ ಪ್ರದೇಶಗಳು ಮುಳುಗುವ ಹಂತಕ್ಕೆ ಬಂದಿದ್ದು, ಇದರಿಂದ ಬೃಂದಾವನ ಬೋಟಿಂಗ್ ಸ್ಥಳದಲ್ಲಿ ಪ್ರವಾಹದ ವಾತಾವರಣ ಸೃಷ್ಟಿಯಾಗಿದೆ.

ಭಾರೀ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಉದ್ಯಾನವನಕ್ಕೆ ಸಾರ್ವಜನಿಕರಿಗೆ ನಿಷೇಧವನ್ನು ಮಾಡಲಾಗಿದೆ. ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಾದ್ದರಿಂದ ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮ ಮುಳುಗಡೆ ಭೀತಿಯಲ್ಲಿದೆ. ಆದ್ದರಿಂದ ಪಕ್ಷಿಧಾಮಕ್ಕೆ ಡಿಸಿಎಫ್ ಸಿದ್ದರಾಮಪ್ಪ ಭೇಟಿ ನೀಡಿದ್ದು, ಪ್ರವಾಸಿಗರ ಸುರಕ್ಷತಾ ಕ್ರಮಗಳ ಬಗೆಗೆ ಪರಿಶೀಲನೆ ನಡೆಸಿದ್ದಾರೆ.

ವೈಮಾನಿಕ ಕ್ಯಾಮರಾದ ದೃಶ್ಯ

ಕನ್ನಡ ನಾಡಿನ ಜೀವನದಿ ಕಾವೇರಿ ತುಂಬಿ ಹರಿಯುತ್ತಿದ್ದು, ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಬ್ರಿಟಿಷರ ಕಾಲದ ವೆಲ್ಲೆಸ್ಲಿ ಸೇತುವೆ ಮೂಲಕ ಹರಿಯುತ್ತಿರುವ ದೃಶ್ಯ ವೈಮಾನಿಕ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೈದುಂಬಿ ಹರಿಯುತ್ತಿರುವ ಕಾವೇರಿಯನ್ನು ನೋಡಲು ಜನಸಾಗರವೇ ಸೇರಿದೆ.

Share This Article
Leave a Comment

Leave a Reply

Your email address will not be published. Required fields are marked *