ಸಿದ್ದರಬೆಟ್ಟದಲ್ಲಿ ಬಾಲಕನನ್ನ ರಕ್ಷಿಸಲು ಹೋದ ನಾಲ್ವರು ನೀರು ಪಾಲು

Public TV
1 Min Read

ಬೆಂಗಳೂರು: ಕಲ್ಯಾಣಿಗೆ ಬಿದ್ದ ಬಾಲಕನನ್ನು ರಕ್ಷಿಸಲು ಹೋಗಿ ಬಾಲಕ ಸೇರಿದಂತೆ ಐವರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ದಾಬಸ್‍ಪೇಟೆ ಬಳಿ ನಡೆದಿದೆ.

ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಸಮೀಪವಿರುವ ಸಿದ್ದರಬೆಟ್ಟದ ಮೇಲಿನ ಕಲ್ಯಾಣಿಯಲ್ಲಿ ಈ ದುರ್ಘಟನೆ ನಡೆದಿದೆ. ಮುನೀರ್ ಖಾನ್(49), ಯಾರಬ್ (21), ರೇಷ್ಮಾ (22), ಮಾಬೀನ್ ರಾಜ್ (21) ಮತ್ತು ಉಸ್ಮಾನ್ (14) ಮೃತ ದುರ್ದೈವಿಗಳು. ಮೃತರು ಬೆಂಗಳೂರಿನ ಕೆಂಗೇರಿಯಿಂದ ಸಿದ್ದರಬೆಟ್ಟಕ್ಕೆ ಪೂಜೆಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.

ಈ ಸಿದ್ದರಬೆಟ್ಟ ಹಿಂದೂ ಮತ್ತು ಮುಸ್ಲಿಂ ಐಕ್ಯತೆಯಾಗಿದ್ದು, ಎರಡು ಸಮುದಾಯದವರು ಬಂದು ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಒಂದೇ ಕುಟುಂಬದವರು ಸಿದ್ದರಬೆಟ್ಟದ ಮೇಲಿನ ಕಲ್ಯಾಣಿಯಲ್ಲಿ ಪೂಜೆ ಮಾಡುವಾಗ ಉಸ್ಮಾನ್ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ.

ಬಾಲಕನನ್ನು ರಕ್ಷಿಸಲು ಒಬ್ಬರಂತೆ ಒಬ್ಬರು ಹೋಗಿ ಐವರು ಕಲ್ಯಾಣಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆಲವು ದಿನಗಳಿಂದ ಮಳೆಯಾಗಿದ್ದರಿಂದ ಕಲ್ಯಾಣಿ ಸುತ್ತ ಪಾಚಿಯಾಗಿತ್ತು. ಹೀಗಾಗಿ ಬಾಲಕನನ್ನು ರಕ್ಷಿಸಲು ಹೋದವರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸ್ಥಳಿಯರು ಹೇಳಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಡಾಬಸ್ ಪೇಟೆ ಪೊಲೀಸರು ದೌಡಾಯಿಸಿ ಶವಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಸದ್ಯಕ್ಕೆ ಐವರಲ್ಲಿ ಮೂವರ ಮೃತದೇಹ ಪತ್ತೆಯಾಗಿದ್ದು, ಉಳಿದ ಮೃತದೇಹಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *