ಪಕ್ಷದ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಲಿ: ಮೋದಿಗೆ ಖರ್ಗೆ ಟಾಂಗ್

Public TV
1 Min Read

ಕಲಬುರಗಿ: ದೇವೇಗೌಡರು ಹಿರಿಯರು ಅನ್ನುವ ಕಾರಣಕ್ಕೆ ಮೋದಿಯವರು ಗೌರವದಿಂದ ಮಾತನಾಡುತ್ತಿರಬಹುದು. ಆದರೆ ಮೊದಲು ಅವರ ಪಕ್ಷದ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಲಿ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟಾಂಗ್ ಕೊಟ್ಟಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಅಡ್ವಾಣಿ, ಜೋಷಿಯವರು ಸಭೆ ಸಮಾರಂಭಗಳಲ್ಲಿ ನಮಸ್ಕಾರ ಹೇಳಿದರೂ ಪ್ರತಿ ನಮಸ್ಕಾರ ಹೇಳುವ ಸೌಜನ್ಯ ಮೋದಿಗೆ ಇಲ್ಲ. ಚುನಾವಣೆಗಾಗಿ ಈ ರೀತಿ ಮಾತನಾಡುವ ಗಿಮಿಕ್ ನಡೆಯುವುದಿಲ್ಲ. ಮೊದಲಿಗೆ ಸಂವಿಧಾನದ ಆಶಯದಂತೆ ಸರ್ಕಾರ ನಡೆಯಲು ಸದಾ ಕಣ್ಣು ಕಿವಿಗಳನ್ನು ತೆರೆದಿಡಬೇಕು ಎಂದು ಹೇಳಿದರು.

ಕಾರ್ಪೆಟ್ ಬಾಂಬಿಂಗ್ ಮಾಡುತ್ತೀನಿ ಎನ್ನುವ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿ ಮೋದಿಯ ಬಾಂಬ್ ನಿಷ್ಕ್ರಿಯ ಮಾಡುವ ಅಸ್ತ್ರಗಳು ನಮ್ಮಲ್ಲಿವೆ. ನಮ್ಮಲ್ಲಿನ ಪ್ರತ್ಯಸ್ತ್ರಗಳ ಮೂಲಕ ಮೋದಿ ಬಾಂಬ್ ನಿಷ್ಕ್ರಿಯ ಮಾಡುವ ಕಲೆ ನಮಗೂ ಗೊತ್ತಿದೆ. ಕಾಂಗ್ರೆಸ್ ನಾಶ ಮಾಡಲು ಎಲ್ಲಾ ಪಕ್ಷಗಳು ಸೇರಿ ಯತ್ನಿಸುತ್ತಿವೆ. ಆದರೆ ಇದನ್ನ ಜನ ತೀರ್ಮಾನಿಸಬೇಕೇ ಹೊರತು ಮೋದಿ ತೀರ್ಮಾನಿಸುವುದಲ್ಲ. ಕಾಂಗ್ರೆಸ್ ಬೀಜದ ಗುಣ ಹೊಂದಿರುವ ಪಕ್ಷ. ನೀವು ಎಷ್ಟೇ ಮಣ್ಣೊಳಗೆ ಹೂತರೂ ಸಸಿಯಾಗಿ ಮೇಲೆಳುವುದೇ ಅದರ ಗುಣ ಎಂದು ಹೇಳಿದರು.

ಮೋದಿ ಅಶಕ್ತ ಬಿಜೆಪಿಗೆ ಟಾನಿಕ್ ಕೊಡಲು ಬಂದಿಲ್ಲ. ಕಾಂಗ್ರೆಸ್ ನಾಶ ಮಾಡುವ ಮಾತನಾಡಲು ಬಂದಿದ್ದಾರೆ. ಕರ್ನಾಟಕದ ಜನ ಮೋದಿ, ಬಿಜೆಪಿ, ಆರ್‍ಎಸ್‍ಎಸ್ ಗುಲಾಮರಾಗಲು ಇಷ್ಟಪಡುತ್ತಿಲ್ಲ. ಗುಜರಾತ್ ಜನ ಮೋದಿಗೆ ಯಾವ ರೀತಿ ಪೆಟ್ಟು ಕೊಟ್ಟಿದ್ದಾರೆ ಅಂತ ಇನ್ನೂ ಅರಿವಿಗೆ ಬಂದಂತಿಲ್ಲ. ಹೋದಲೆಲ್ಲಾ ನೆಹರೂ ಕಟುಂಬವನ್ನೂ ಕೀಳಾಗಿ ಟೀಕಿಸುತ್ತಿದ್ದಾರೆ. ದೇಶದ ಅಭಿವೃದ್ಧಿಯ ಮಾತು ಬಿಟ್ಟು ಸಣ್ಣ ಸಣ್ಣ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *