ಭಾರತಕ್ಕೂ ವಕ್ಕರಿಸಿದ ಕರೋನಾ ವೈರಸ್ ಮಹಾಮಾರಿ- ಮೊದಲ ಕೇಸ್ ದಾಖಲು

Public TV
2 Min Read

ನವದೆಹಲಿ: ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿರುವ ಮಹಾಮಾರಿ ಕರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ದೇಶದಲ್ಲಿ ಮೊದಲ ಪ್ರಕರಣ ದಾಖಲಾಗಿದೆ.

ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಕೇರಳ ವಿದ್ಯಾರ್ಥಿಯೊಬ್ಬನಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಸದ್ಯ ಆತನಿಗೆ ಕೇರಳದ ತ್ರಿಶ್ಯೂರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಭಾರತದಾದ್ಯಂತ ಸುಮಾರು 900 ಜನರು ಪರೀಕ್ಷೆಗೆ ಒಳಪಡಿಸಲಾಗಿದೆ. ಕೇರಳದಲ್ಲಿ ವೀಕ್ಷಣೆಯಲ್ಲಿರುವ 806 ಜನರಲ್ಲಿ 10 ಮಂದಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳಲ್ಲಿದ್ದರೆ, ಉಳಿದವರು ಮನೆಯಿಂದಲೇ ಆಸ್ಪತ್ರೆಗಳ ಸಂಪರ್ಕದಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಕನಿಷ್ಠ 27 ಜನರನ್ನು ವೀಕ್ಷಣೆಗೆ ಒಳಪಡಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರಲ್ಲಿ 10 ಜನರನ್ನು ಪ್ರತ್ಯೇಕಿಸಲಾಗಿದೆ. ಎರಡು ದಿನಗಳ ಹಿಂದೆ ಚೀನಾದಿಂದ ಹಿಂದಿರುಗಿದ ಪಂಜಾಬ್‍ನ ಮೊಹಾಲಿಯ ನಿವಾಸಿ 28 ವರ್ಷದ ಯುವಕನನ್ನು ಚಂಡೀಗಢ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿದೆ.

ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ತ್ರಿಪುರದ ಮುನೀರ್ ಎಂಬಾತ ಕರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾನೆ. ಕರೋನಾ ವೈರಸ್ ಇದುವರೆಗೂ 17 ದೇಶಗಳಿಗೆ ವ್ಯಾಪಿಸಿದ್ದು, 170ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 8 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸಿದೆ. ಈ ಬೆನ್ನಲ್ಲೇ ಶುಕ್ರವಾರ ವುಹಾನ್‍ನಿಂದ ಭಾರತೀಯರ ಮೊದಲ ತಂಡವನ್ನು ಏರ್‌ಲಿಫ್ಟ್‌ ಮಾಡಲು ಸಕಲ ಸಿದ್ಧತೆಗಳನ್ನು ಕೇಂದ್ರ ಸರ್ಕಾರ ನಡೆಸಿದೆ.

ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ಕರೋನಾ ವೈರಸ್ ದೇಶದೊಳಗೆ ಪ್ರವೇಶಿಸದಂತೆ ರಷ್ಯಾ ಮುನ್ನೆಚ್ಚೆರಿಕಾ ಕ್ರಮಕೈಗೊಂಡಿದೆ. ಈ ನಿಟ್ಟಿನಲ್ಲಿ ರಷ್ಯಾ ಚೀನಾದೊಂದಿಗೆ ಇರುವ 2,600 ಮೈಲಿ ಗಡಿಯನ್ನು ಮುಚ್ಚುತ್ತಿದೆ.

ಚೀನಾದ ಹುಬೈ ಪ್ರಾಂತ್ಯದ ರಾಜಧಾನಿಯಾದ ವುಹಾನ್ ಕೊರೊನಾವೈರಸ್ ಕೇಂದ್ರವಾಗಿದೆ. ಈ ವೈರಸ್ ಈಗ ವಿಶ್ವದ ಅನೇಕ ಭಾಗಗಳಲ್ಲಿ ಹರಡುತ್ತಿದೆ. ಚೀನಾದ ಕೊರೊನಾವೈರಸ್ ರೋಗದಿಂದ ರಾಷ್ಟ್ರವ್ಯಾಪಿ ಸಾವನ್ನಪ್ಪಿದವರ ಸಂಖ್ಯೆ 170ಕ್ಕೆ ಏರಿದ್ದು, ಹುಬೈ ಪ್ರಾಂತ್ಯದಲ್ಲಿ 38 ಸಾವುನೋವುಗಳು ವರದಿಯಾಗಿವೆ.

ವೈರಸ್ ಹೇಗೆ ಹರಡುತ್ತದೆ?
ಮಹಾಮಾರಿ ಕರೋನಾ ವೈರಸ್ ಹರಡುವ ನಿರ್ದಿಷ್ಟ ವಿಧಾನಗಳು ಇನ್ನೂ ಸ್ಪಷ್ಟವಾಗಿಲ್ಲ. ಈ ವೈರಸ್ ಬಹುಶಃ ಮೂಲತಃ ಪ್ರಾಣಿ ಮೂಲದಿಂದ ಹೊರಹೊಮ್ಮಿದೆ. ಆದರೆ ಈಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಎಷ್ಟು ಸುಲಭವಾಗಿ ಹರಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನುವಾಗ ಸೋಂಕು ತಗಲುತ್ತದೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *