ಕೊಪ್ಪಳ: ಮೇವಿನ ಬಣವೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Public TV
1 Min Read

– ಬಿಸಿಲಿನ ತಾಪಕ್ಕೆ 25ಕ್ಕೂ ಹೆಚ್ಚು ಕುರಿಗಳ ಸಾವು

ಕೊಪ್ಪಳ: ಬರಗಾಲ ಪೀಡಿತ ಜಿಲ್ಲೆಯೆಂಬ ಹೆಸರನ್ನ ಹೊತ್ತಿರುವ ಜಿಲ್ಲೆಯ ಗಂಗಾವತಿ ತಾಲೂಕಿನ ಈಳಿಗನೂರು ಕ್ಯಾಂಪ್ ನಲ್ಲಿ ರೈತರೊಬ್ಬರು ಸಂಗಹಿಸಿದ ಮೇವಿನ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚುವ ಮೂಲಕ ಕ್ರೌರ್ಯವನ್ನು ಮೆರೆದಿದ್ದಾರೆ.

ಗ್ರಾಮದ ವೆಂಕಟನಾರಾಯಣ ಎಂಬವರಿಗೆ ಸೇರಿದ ಮೇವು ಬೆಂಕಿಗೆ ಆಹುತಿಯಾಗಿದೆ. 25 ಎಕರೆಯಷ್ಟು ಜಮೀನನ್ನು ಹೊಂದಿದ್ದ ವೆಂಕಟನಾರಾಯಣ ಗದ್ದೆಯಲ್ಲಿ ದೊಡ್ಡದಾದ ಬಣವೆಯೊಂದನ್ನು ಹಾಕಿದ್ದರು. ಆದರೆ ಯಾರೊ ಕಿಡಿಗೇಡಿಗಳು ಮೇವಿಗೆ ಬೆಂಕಿ ಹಾಕಿದ್ದಾರೆ ಎಂದು ವೆಂಕಟನಾರಾಯಣ ದುಃಖ ಭರಿತರಾಗಿ ಹೇಳುತ್ತಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಂಬಂಧ ಕಾರಟಗಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

ಬಿಸಿಲಿಗೆ ಕುರಿಗಳ ಸಾವು: ನೀರು ಮತ್ತು ಮೇವಿನ ಕೊರತೆಯಿಂದ ಕಂಗಾಲಾಗಿದ್ದ ಜಾನುವಾರುಗಳಿಗೆ ಇದೀಗ ಬಿಸಿಲು ಮತ್ತೊಂದು ಸಮಸ್ಯೆಯಾಗಿದೆ. ಬಿರು ಬಿಸಿಲಿನ ತಾಪಕ್ಕೆ ಕೊಪ್ಪಳ ತಾಲೂಕಿನ ಜಬ್ಬಲಗುಡ್ಡ ಗ್ರಾಮದಲ್ಲಿ 25ಕ್ಕೂ ಹೆಚ್ಚು ಕುರಿ ಸಾವನ್ನಪ್ಪಿವೆ. ಸುಮಾರು 20ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ.

ಸೋಮಪ್ಪ ಕಬ್ಬೇರ ಎಂಬವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದ್ದು, ಬಿಸಿಲಿನಿಂದ ಕಂಡು ಬರುವ ಸಿ ಫಾಕ್ಸ್ ಕಾಯಿಲೆಯಿಂದ ಕುರಿಗಳು ಸತ್ತಿವೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಸದ್ಯ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಬಿಸಿಲು ಹೆಚ್ಚಾಗುವುದರಿಂದ ಕಂಡು ಬರುವ ಸಿ ಫಾಕ್ಸ್ ಕಾಯಿಲೆ ಕುರಿಗಾರರನ್ನು ಕಂಗೆಡಿಸಿದೆ. ಬಿಸಿಲಿನ ತಾಪದ ಜೊತೆಗೆ ಕಾಡಿನಲ್ಲಿ ಕುರಿಗೆ ನೀರು, ಆಹಾರ ಸಿಗದಿರುವುದೂ ಕುರಿ ಸಾವಿಗೆ ಕಾರಣ ಎನ್ನಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *