ಬೆಂಗಳೂರು: ಬಣ್ಣ ತಯಾರಿಕಾ ಕಾರ್ಖಾನೆಯೊಂದಕ್ಕೆ ತಡರಾತ್ರಿ ಬೆಂಕಿ ಬಿದ್ದ ಪರಿಣಾಮ, ಕಾರ್ಖಾನೆಯಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ನಗರದ ಹೊರವಲಯ ಆನೇಕಲ್ನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಜಿಗಣಿ ವಡ್ಡರಾಮಚನಹಳ್ಳಿ ರಸ್ತೆಯಲ್ಲಿರುವ ಕಲರ್ ಟೆಕ್ ಪ್ರೋಡಕ್ಷನ್ ಎಂಬ ಬಣ್ಣ ತಯಾರಿಕಾ ಕಾರ್ಖಾನೆಯ ಎರಡನೇ ಮಹಡಿಯಲ್ಲಿ ತಡರಾತ್ರಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ ಎರಡನೇ ಮಹಡಿಯಲಿದ್ದ ಲಕ್ಷಾಂತರ ಮೌಲ್ಯದ ಪೀಠೋಪಕರಣಗಳು, ಹಾಗೂ ಬಣ್ಣದ ಕಚ್ಚಾ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ.
ಸ್ಥಳಕ್ಕೆ ಆಗಮಿಸಿದ ಎಲೆಕ್ಟ್ರಾನಿಕ್ ಸಿಟಿಯ 2 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದೆಂದು ಶಂಕೆ ವ್ಯಕ್ತವಾಗಿದ್ದು, ಕಾರ್ಖಾನೆಯಲ್ಲಿ ರಾತ್ರಿ ವೇಳೆ ಕೆಲಸ ಇರದೇ ಇದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews