– ಹತ್ತೇ ನಿಮಿಷದಲ್ಲಿ ಬಸ್ ಸುಟ್ಟು ಕರಕಲು
ಲಕ್ನೋ: ಉತ್ತರ ಪ್ರದೇಶದ (Uttarpradesh) ರಾಜಧಾನಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಖಾಸಗಿ ಸ್ಪೀಪರ್ ಬಸ್ನಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದ್ದು ಐವರು ಸಜೀವ ದಹನವಾಗಿರುವ ಘಟನೆ ನಡೆದಿದೆ.
ಲಕ್ನೋದ (lucknow) ಮೋಹನ್ ಲಾಲ್ ಗಂಜ್ ಪ್ರದೇಶದ ಕಿಸಾನ್ ಪಥದಲ್ಲಿ ಘಟನೆ ನಡೆದಿದ್ದು, ಬಸ್ನಲ್ಲಿ ಪ್ರಯಾಣಿಸುತ್ತಿದ್ದ 60 ಪ್ರಯಾಣಿಕರ ಪೈಕಿ ಐವರು ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಉಗ್ರರ ವಿರುದ್ಧ ಸಿಡಿದೆದ್ದ ಭಾರತ – ‘ಆಪರೇಷನ್ ಸಿಂಧೂರ’ಗೆ ಜೈ ಎಂದ ಬ್ರಿಟಿಷ್ ಸಂಸದ
ಹತ್ತೇ ನಿಮಿಷದಲ್ಲಿ ಬಸ್ ಸುಟ್ಟು ಕರಕಲು:
ಖಾಸಗಿ ಸ್ಲೀಪರ್ ಬಸ್ (Sleeper Bus) ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿತ್ತು. ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ, ಇದು ತಕ್ಷಣಕ್ಕೆ ಪ್ರಯಾಣಿಕರಿಗೆ ಗಮನಕ್ಕೆ ಬಂದಿಲ್ಲ. ಆದ್ರೆ ಇದ್ದಕ್ಕಿದ್ದಂತೆ ಹೊಗೆ ತುಂಬಿಕೊಂಡು ಉಸಿರುಗಟ್ಟಿದ ಅನುಭವವಾಗಿದೆ. ಬಳಿಕ ಒಂದಿಬ್ಬರು ಪ್ರಯಾಣಿಕರು ನೋಡಿದಾಗ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ. ಆತಂಕಗೊಂಡ ಪ್ರಯಾಣಿಕರು ಕಿಟಕಿ ಗಾಜು ಹೊಡೆದು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಮಣಿಪುರದ ಚಾಂದೆಲ್ನಲ್ಲಿ ಎನ್ಕೌಂಟರ್ – 10 ಉಗ್ರರನ್ನು ಹತ್ಯೆ ಮಾಡಿದ ಭಾರತೀಯ ಸೇನೆ
ಬೆಂಕಿ ಹೊತ್ತಿಕೊಂಡಿರುವುದು ನೋಡ್ತಿದ್ದಂತೆ ಸುತ್ತಮುತ್ತಲಿನ ಜನ ನೆರವಿಗೆ ಧಾವಿಸಿದ್ದಾರೆ, ಜೊತೆಗೆ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಬಂದ ರಕ್ಷಣಾ ತಂಡ ಅಗ್ನಿ ನಂದಿಸಲು ಹರಸಾಹಸಪಟ್ಟಿತು. ಅಷ್ಟೊತ್ತಿಗೆ ಇಡೀ ಬಸ್ ಸುಟ್ಟು ಹೋಗಿತ್ತು. ಈ ಅಪಘಾತದಲ್ಲಿ 5 ಪ್ರಯಾಣಿಕರು ಸಜೀವ ದಹನವಾಗಿದ್ದು, ಅವರನ್ನು ಇನ್ನೂ ಗುರುತಿಸಲಾಗಿಲ್ಲ. ಇತರ ಪ್ರಯಾಣಿಕರನ್ನು ಸಕಾಲದಲ್ಲಿ ಬಸ್ಸಿನಿಂದ ಇಳಿಸಲಾಯಿತು ಎಂದು ತಿಳಿದುಬಂದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಸ್ ಚಾಲಕ ಮೊದಲು ಗಾಜು ಒಡೆದು ಬಸ್ಸಿನಿಂದ ಜಿಗಿದು ಪರಾರಿಯಾಗಿದ್ದಾನೆ. ಅಪಘಾತದ ಬಳಿಕ ಕಾಣೆಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತದ ಕಾರಣಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ – ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳು ಅರೆಸ್ಟ್