ಕೆಮಿಕಲ್ ನೀರಿನಿಂದ ಕೆರೆಯಲ್ಲಿ ಬೆಂಕಿ

Public TV
1 Min Read

ಬೆಂಗಳೂರು: ಕೆಲ ದಿನಗಳ ಹಿಂದೆ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿ ವಿಶ್ವದಲ್ಲೇ ಬೆಂಗಳೂರಿನ ಮಾನವನ್ನು ಹರಾಜು ಹಾಕಿತ್ತು. ಇದೀಗ ಬೆಂಗಳೂರಿನ ಮತ್ತೊಂದು ಕೆರೆಯಲ್ಲಿ ಕೆಮಿಕಲ್ ನೀರಿನಿಂದ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ.

ಬೆಂಗಳೂರು ಹೊರವಲಯದ ಆನೇಕಲ್‍ನ ಬೊಮ್ಮಸಂದ್ರ ಕೆರೆಯ ಸುತ್ತಮುತ್ತ ನೂರಾರು ಕೆಮಿಕಲ್ ಕಾರ್ಖಾನೆಗಳಿದೆ. ಈ ಕಾರ್ಖಾನೆಗಳು ಬಿಡುವ ಕೆಮಿಕಲ್‍ನಿಂದ ಕೆರೆ ಸಂಪೂರ್ಣ ಕಲುಷಿತಗೊಂಡಿದೆ. ಇಂದು ಸಹ ಕೆಲವು ಕಾರ್ಖಾನೆಗಳು ಕೆಮಿಕಲ್ ನೀರನ್ನು ಕಾಲುವೆಗೆ ಬಿಟ್ಟಿದ್ದು, ಕೆಮಿಕಲ್ ಹಾಗೂ ನೀರು ಎರಡು ಬೆರೆತ ತಕ್ಷಣ ಬೆಂಕಿ ಕಾಣಿಸಿ ಕೊಂಡಿದೆ. ಇದರಿಂದ ಕೆರೆ ಒಂದು ಭಾಗ ಸುಟ್ಟು ಹೋಗಿ ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ನೀರನ್ನು ಬಿಟ್ಟರು ಅದು ಮತ್ತಷ್ಟು ಹೆಚ್ಚಾಗುತ್ತಿದೆ. ಕೆರೆಯ ನೀರಿಗೆ ಕೆಮಿಕಲ್ ನೀರು ಬಿಟ್ಟಿರುವುದರಿಂದ ಬೆಂಕಿ ಕಾಣಿಸಿಕೊಳ್ಳುತಿದೆ. ಪ್ರತಿ ಬಾರಿ ಬೆಂಕಿ ಕಾಣಿಸಿಕೊಂಡ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿ ಹೋಗುತ್ತಾರೆ. ಆದರೆ ಇವರೆಗೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ಸುಳಿಯಲಿಲ್ಲ ಎಂದು ಸ್ಥಳೀಯರು  ಆರೋಪಿಸಿದ್ದಾರೆ.

ಕೆಮಿಕಲ್ ನೀರಿನಿಂದ ಪ್ರತಿ ವರ್ಷ ಸಾವಿರಾರು ಮೀನುಗಳು ಸಾವನ್ನಪುತ್ತಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ ಅಭಿವೃಧ್ಧಿ ಪ್ರಾಧಿಕಾರ, ಬೊಮ್ಮಸಂದ್ರ ಪುರಸಭೆಗೆ ದೂರು ನೀಡಿದರೂ ಕ್ರಮ ಜರುಗಿಸುತ್ತಿಲ್ಲ. ಇವರೆಲ್ಲ ಬೊಮ್ಮಸಂದ್ರ ಕೆಮಿಕಲ್ ಕಾರ್ಖಾನೆಗಳ ಜೊತೆ ಶಾಮಿಲಾಗಿರುವ ಬಗ್ಗೆ ಸ್ಥಳೀಯರು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರದಿದ್ದರೆ ಕೆರೆ, ಹಾಗೂ ಕೆರೆಯ ಅಕ್ಕಪಕ್ಕದ ಮನೆಗಳು ಸಂಪೂರ್ಣವಾಗಿ ಸುಟ್ಟು ಹೋಗುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *