ಬೆಂಕಿ ದುರ್ಘಟನೆಗೆ ಕಾರಣ ನಿಗೂಢ – ಘಟನೆ ಬಗ್ಗೆ ಕಂಪ್ಲೆಂಟ್ ಕೊಟ್ಟ ಮನೆ ಮಾಲೀಕ

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯ ಬೇಗೂರು ಬಳಿಯ ಅಪಾರ್ಟ್ ಮೆಂಟ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ತಾಯಿ-ಮಗಳು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ದೂರು ದಾಖಲಿಸಿದ್ದಾರೆ.

ನಿನ್ನೆ ರಾತ್ರಿಯೇ ಮನೆ ಮಾಲೀಕ ಭೀಮಸೇನ್ ರಾವ್ ಹಾಗೂ ಅಳಿಯ ಸಂದೀಪ್ ಬೇಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ. ಜೊತೆಗೆ ಪತ್ನಿ ಹಾಗೂ ತಾಯಿ ಸಾವನ್ನಪ್ಪಿದ್ದಾರೆ. ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಂಕಿಗೆ ಕಾರಣ ಹುಡುಕಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಅನ್ವಯ ಅಗ್ನಿ ಅಪಘಾತ ಹಾಗೂ ಅಸಹಜ ಸಾವು ಎಂದು ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ.

ಘಟನೆ ಬಗ್ಗೆ ಆಶ್ರಿತ್ ಆಸ್ಪೈರ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ಮಾತನಾಡಿ, ಎಷ್ಟೇ ಒದ್ದಾಡಿದರೂ ಕೂಡ ಇಬ್ಬರನ್ನು ಉಳಿಸಲು ಸಾಧ್ಯವಾಗಿಲ್ಲ. ಮನೆಯಲ್ಲಿ ನಾಲ್ಕು ಜನ ವಾಸ ಇದ್ದರು. ಮೊಮ್ಮಗನನ್ನು ನಾವೇ ಹೊರಗಡೆ ಕರೆದುಕೊಂಡು ಬಂದೆವು. ಕೆಲಸಕ್ಕೆ ಹೋಗಿದ್ದ ಮನೆಯ ಯಜಮಾನ ನಂತರ ಬಂದಿದ್ದಾರೆ. ಮನೆಯಲ್ಲಿ ಅಜ್ಜಿ, ಮಹಿಳೆ, ಮಗು ಮನೆಯಲ್ಲಿ ಇದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿನ್ನೆಯಷ್ಟೇ ಅಮೆರಿಕದಿಂದ ಬೆಂಗಳೂರಿಗೆ ಲ್ಯಾಂಡ್ – ಇಂದು ಬೆಂಕಿಗೆ ಬಲಿ

ಈ ಸಂಬಂಧ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ರಾಮಕೃಷ್ಣ ಪ್ರತಿಕ್ರಿಯಿಸಿ, ಘಟನೆಯಿಂದ 2 ಪ್ಲ್ಯಾಟ್ ಗಳಿಗೆ ತುಂಬಾ ಹಾನಿಯಾಗಿದೆ. ಮನೆಯಲ್ಲಿದ್ದ 2 ಸಿಲಿಂಡರ್‍ಗಳಿಗೆ ಯಾವುದೇ ಹಾನಿಯಾಗಿಲ್ಲ. ಬೆಂಕಿ ಯಾವ ರೀತಿ ಹೊತ್ತಿಕೊಂಡಿದೆ ಎನ್ನುವುದು ಬೆಳಕಿಗೆ ಬರಬೇಕಿದೆ. ಅಪಾರ್ಟ್‍ಮೆಂಟ್ ನಲ್ಲಿ 72 ಫ್ಲ್ಯಾಟ್ ಇದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *