ತಮಿಳುನಾಡಿನಲ್ಲಿ ಸ್ಟಂಟ್‌ಮೆನ್ ಸಾವು – ಚಿತ್ರನಿರ್ದೇಶಕ ಪ.ರಂಜಿತ್ ವಿರುದ್ಧ ಎಫ್‌ಐಆರ್

Public TV
2 Min Read

– ಶೂಟಿಂಗ್ ವೇಳೆ ವಾಹನ ಮಗುಚಿ ಸಾವನ್ನಪ್ಪಿದ್ದ ಸ್ಟಂಟ್‌ಮೆನ್

ಚೆನ್ನೈ: `ವೆಟ್ಟುವಮ್’ (Vettuvam) ತಮಿಳು ಸಿನಿಮಾ ಶೂಟಿಂಗ್ ವೇಳೆ ಕಾರಿನಲ್ಲಿ ಸ್ಟಂಟ್ ಮಾಡುವಾಗ ಸ್ಟಂಟ್‌ಮೆನ್ (Stuntman) ಒಬ್ಬರು ಸಾವಿಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿರ್ದೇಶಕ ಪ.ರಂಜಿತ್ (Pa Ranjith) ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಕಾಲಿವುಡ್‌ನ ಸಾಹಸ ಕಲಾವಿದ ಮೋಹನ್ ರಾಜು ಮೃತ ಸ್ಟಂಟ್‌ಮ್ಯಾನ್. ಪ.ರಂಜಿತ್ ನಿರ್ದೇಶನದಲ್ಲಿ ತಮಿಳು ನಟ ಆರ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ವೆಟ್ಟುವಂ ಸಿನಿಮಾ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿತ್ತು.ಇದನ್ನೂ ಓದಿ: ಶೂಟಿಂಗ್ ವೇಳೆ ಯಡವಟ್ಟು: SUVಯಲ್ಲಿ ಸ್ಟಂಟ್ ವೇಳೆ ಅವಘಡ – ತಮಿಳುನಾಡಿನ ಸ್ಟಂಟ್‌ಮೆನ್ ಸಾವು

ಈ ಕುರಿತು ನಿರ್ದೇಶಕ ಪ.ರಂಜಿತ್ ಮಾತನಾಡಿ, ಸಿನಿಮಾ ಶೂಟಿಂಗ್ ವೇಳೆ ಪಾಲೀಸಬೇಕಾದ ಎಲ್ಲಾ ನಿಯಮಗಳನ್ನು ನಾವು ಪಾಲಿಸಿದ್ದೇವೆ. ಕಾರ್ ಸ್ಟಂಟ್ ವೇಳೆ ಯಾವುದೇ ಅಪಘಾತವಾಗದಂತೆ ನಾವು ಎಲ್ಲಾ ರೀತಿ ಮುನ್ನೆಚ್ಚರಿಕೆಗಳನ್ನು ಅನುಸರಿಸಿದ್ದೇವು. ಆದರೆ ಇದೆಲ್ಲದರ ನಡುವೆ ನಾವು ಅನುಭವಿ ಸ್ಟಂಟ್‌ಮೆನ್‌ನ್ನು ಕಳೆದುಕೊಂಡಿದ್ದೇವೆ. ಈ ಸಾವು ಅತೀವ ನೋವನ್ನು ತಂದಿದ್ದು, ಮೋಹನ್ ರಾಜ್ ಅವರ ಅಣ್ಣ, ಪತ್ನಿಗೆ ದೇವರು ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ. ನಮ್ಮ ನೆನಪಿನಲ್ಲಿ ಸದಾ ಅಮರರಾಗಿರುತ್ತಾರೆ ಎಂದರು.

ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಸದ್ಯ ಪೊಲೀಸರು ಸಿನಿಮಾ ನಿರ್ದೇಶಕ ಪ.ರಂಜಿತ್ ಸೇರಿ ನಾಲ್ವರ ವಿರುದ್ಧ ಬಿಎನ್‌ಎಸ್ 289, 125 ಮತ್ತು 106(1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಘಟನೆ ನಡೆದಿದ್ದು ಹೇಗೆ?
ಕಾರು ಪಲ್ಟಿಯಾಗುವ ಅವಘಡದ ವಿಡಿಯೋ ಅಲ್ಲಿಯೇ ಇದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು ಎಸ್‌ಯುವಿಯನ್ನು ಓಡಿಸುತ್ತಾ, ರ‍್ಯಾಂಪ್ ಮೇಲೆ ಹೋಗುತ್ತಾರೆ. ಅಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿತ್ತು. ಈ ವೇಳೆ, ಅವರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗೆ ಅಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗಲಾಗಿತ್ತು.

ವೆಟ್ಟುವಂ ಚಿತ್ರವು 2021ರ ತಮಿಳು ಸಿನಿಮಾ `ಸರ್ಪಟ್ಟ ಪರಂಬರೈ’ ಚಿತ್ರದ ಮುಂದುವರಿದ ಭಾಗ ಎನ್ನಲಾಗಿದ್ದು, 2026ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.ಇದನ್ನೂ ಓದಿ: ನೀವೆಲ್ಲ ಮಠಕ್ಕೆ ಹೋಗೋಣ ಅಂದ್ರೆ ಬರುತ್ತೇನೆ, ಇಲ್ದಿದ್ರೆ ಭಕ್ತರ ಮನೆಯಲ್ಲೇ ಇರುತ್ತೇನೆ: ಭಾವುಕರಾದ ಜಯ ಮೃತ್ಯುಂಜಯ ಶ್ರೀ‌

Share This Article