ಕರ್ನಲ್ ಸೋಫಿಯಾ ಪತಿ ಮನೆ ಮೇಲೆ RSS ದಾಳಿ ವದಂತಿ – ಪೋಸ್ಟ್ ಮಾಡಿದ್ದವನ ವಿರುದ್ಧ FIR

By
2 Min Read

ಬೆಳಗಾವಿ: `ಆಪರೇಷನ್ ಸಿಂಧೂರ’ದ (Operation Sindoor) ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ (Colonel Sophia Qureshi) ಪತಿ ಮನೆ ಮೇಲೆ ಆರ್‌ಎಸ್‌ಎಸ್ (RSS) ದಾಳಿ ನಡೆಸಿದೆ ಎಂಬ ವದಂತಿ ಹಬ್ಬಿಸಿದ ವ್ಯಕ್ತಿಯ ವಿರುದ್ಧ ಇದೀಗ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ವದಂತಿ ಹಬ್ಬಿಸಿದ್ದ ಅನೀಸ್ ಉದ್ದೀನ್ ಮೇಲೆ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಅವರ ಸೂಚನೆ ಮೇರೆಗೆ ಬಿಎನ್‌ಎಸ್ ಕಾಯ್ದೆಯಡಿ 353(2), 192 ಸೆಕ್ಷನ್ ಅಡಿಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಪ್ರಧಾನಿ ಮೋದಿ, ರಫೆಲ್ ಯುದ್ಧ ವಿಮಾನದ ಬಗ್ಗೆ ಅವಹೇಳನಕಾರಿ ಪೋಸ್ಟ್ – ಯುವಕ ಅರೆಸ್ಟ್

ಈ ಕುರಿತು ಬುಧವಾರ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ ಮಾಧ್ಯಮದವರೊಂದಿಗೆ ಮಾತನಾಡಿ, ಎಕ್ಸ್ ಖಾತೆಯಲ್ಲಿ ಕರ್ನಲ್ ಸೋಫಿಯಾ ಪತಿ ಮನೆಯ ಮೇಲೆ ಆರ್‌ಎಸ್‌ಎಸ್ ಬೆಂಬಲಿತ ಹಿಂದೂಗಳು ದಾಳಿ ಮಾಡಿ, ಮನೆ ದ್ವಂಸ ಮಾಡಿದ್ದಾರೆ ಎಂದು ಸುಳ್ಳು ಪೋಸ್ಟ್ ಹಾಕಲಾಗಿತ್ತು. ಅನೀಸ್ ಉದ್ದಿನ್ ಎಂಬಾತ ಎಕ್ಸ್ ಖಾತೆಯಲ್ಲಿ ಸುಳ್ಳು ಸುದ್ದಿ ಹಾಕಿಕೊಂಡಿದ್ದ ಎಂದು ಹೇಳಿದ್ದರು.

ಪೋಸ್ಟ್‌ನಲ್ಲಿ ಕರ್ನಲ್ ಸೋಫಿಯಾ ಅವರ ಫೋಟೋ ಹಾಗೂ ಮನೆಯನ್ನು ಧ್ವಂಸ ಮಾಡಿರುವ ಯಾವುದೋ ಒಂದು ಹಳೆಯ ಫೋಟೋವನ್ನು ಹಾಕಿ ಹಂಚಿಕೊಳ್ಳಲಾಗಿತ್ತು. ಈ ವಿಚಾರವಾಗಿ ಜಿಲ್ಲಾ ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಟೀಂ ನಮ್ಮ ಗಮನಕ್ಕೆ ತಂದಿತ್ತು. ನಾನು ಅದಕ್ಕೆ ಇದು ಸುಳ್ಳು ಸುದ್ದಿ ಎಂದು ಕಾಮೆಂಟ್ ಮಾಡಿ, ತಕ್ಷಣವೇ ಪೋಸ್ಟ್ ಡಿಲೀಟ್ ಮಾಡುವಂತೆ ಸೂಚಿಸಿದ್ದೆ. ಕೂಡಲೇ ನಾವು ಸೋಫಿಯಾ ಖುರೇಷಿ ಅವರ ಪತಿ ಮನೆಗೆ ನಮ್ಮ ಪೊಲೀಸರನ್ನು ಕಳಿಸಿದ್ದೆವು, ಯಾವುದೇ ದಾಳಿ ನಡೆದಿಲ್ಲ ಎನ್ನುವುದು ಗೊತ್ತಾಗಿದೆ. ಆದರೂ ಸುರಕ್ಷತಾ ದೃಷ್ಟಿಯಿಂದ ಪೊಲೀಸರು ಸೋಫಿಯಾ ಪತಿ ಮನೆಗೆ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದ್ದರು.

ಪೋಸ್ಟ್ ಮಾಡಿದ ವ್ಯಕ್ತಿ ಕೊಲಂಬಿಯಾ ಮೂಲದವನು ಎಂದು ಗೊತ್ತಾಗಿದೆ. ಹೊರದೇಶದವನು ಎಂದು ಗೊತ್ತಾಗಿದ್ದಕ್ಕೆ ಎಫ್‌ಐಆರ್ ಮಾಡಿಕೊಂಡಿಲ್ಲ. ಸದ್ಯ ಎಕ್ಸ್ ಲೀಗಲ್ ಟೀಂನಿಂದ ಮಾಹಿತಿ ಪಡೆಯುತ್ತಿದ್ದೇವೆ. ಒಂದು ವೇಳೆ ಆತ ಭಾರತದವನು ಎಂದು ಗೊತ್ತಾದರೆ ಎಫ್‌ಐಆರ್ ಮಾಡಿಕೊಳ್ಳುತ್ತೇವೆ. ಅವಶ್ಯಕತೆ ಬಿದ್ದರೆ ಅವನನ್ನು ಅರೆಸ್ಟ್ ಕೂಡ ಮಾಡುತ್ತೇವೆ. ಒಂದು ಕಮ್ಯೂನಿಟಿಯಿಂದ ಮತ್ತೊಂದು ಕಮ್ಯುನಿಟಿಗೆ ದ್ವೇಷ ಬಿತ್ತುವ ಕೆಲಸ ಮಾಡಬಾರದು. ಹಾಗೆ ಮಾಡಿದರೆ ಅಂತವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳುತ್ತೇವೆ ಎಂದಿದ್ದರು.ಇದನ್ನೂ ಓದಿ: ಬಿಬಿಎಂಪಿ ರದ್ದು, ಇನ್ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ

Share This Article