– ಬಂಧಿತರನ್ನು ತೀವ್ರ ವಿಚಾರಣೆ ನಡೆಸುತ್ತಿರುವ ಎನ್ಐಎ
– ದಾಳಿ ನಡೆಸಿ ಉಗ್ರರ ಯೋಜನೆ ವಿಫಲಗೊಳಿಸಿದ್ದ ಸಿಸಿಬಿ
ಬೆಂಗಳೂರು: ಬಾಂಬ್ ಸ್ಫೋಟಿಸಿ (Bomb Blast) ಸಿನಿಮಾ ಸ್ಟೈಲ್ನಲ್ಲಿ ಪರಪ್ಪನ ಅಗ್ರಹಾರದಿಂದ (Parappana Agrahara) ಪರಾರಿಯಾಗಲು ಟಿ ನಾಸೀರ್ (T Nasir) ಮುಂದಾಗಿದ್ದ ಸ್ಫೋಟಕ ವಿಚಾರ ರಾಷ್ಟ್ರೀಯ ತನಿಖಾ ದಳದ (NIA) ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಹೌದು. 2008ರ ಬೆಂಗಳೂರು ಸ್ಫೋಟದಲ್ಲಿ (Bengaluru Blast) ಜೈಲುಪಾಲಾಗಿರುವ ಲಷ್ಕರ್ ಸಂಘಟನೆಯ ಉಗ್ರ ನಾಸೀರ್ ಮುಸ್ಲಿಂ ಯುವಕರ ತಂಡ ಬಳಸಿ ಹೊರ ಬರಲು ಖತರ್ನಾಕ್ ಪ್ಲ್ಯಾನ್ ಮಾಡಿದ್ದ ವಿಚಾರ ಎನ್ಐಎ ಮೂಲಗಳಿಂದ ತಿಳಿದು ಬಂದಿದೆ.
ಏನಿದು ಯೋಜನೆ?
ಸದ್ಯದ ಪರಿಸ್ಥಿತಿಯಲ್ಲಿ ಹೊರ ಬರಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ನಾಸೀರ್ ಜೈಲಿನಲ್ಲೇ ಪ್ಲ್ಯಾನ್ ಮಾಡಿದ್ದ. ಪ್ರಕರಣ ಸಂಬಂಧ ನಾಸೀರ್ನನ್ನು ಜೈಲಿನಿಂದ ಹಲವು ಬಾರಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ಜೈಲಿನಿಂದ ನ್ಯಾಯಾಲಯಕ್ಕೆ ಹೋಗುವಾಗ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ. ಬಾಂಬ್ ಸ್ಫೋಟಗೊಂಡಾಗ ಪೊಲೀಸರ ಗಮನ ಬೇರೆಡೆ ಹೋಗುತ್ತದೆ. ಈ ವೇಳೆ ಪರಾರಿಯಾಗಬಹುದು ಎಂಬ ಲೆಕ್ಕಾಚಾರವನ್ನು ನಾಸೀರ್ ಹಾಕಿಕೊಂಡಿದ್ದ. ಇದನ್ನೂ ಓದಿ: ಜೈಲಲ್ಲಿರೊ ಉಗ್ರ ನಾಸೀರ್ಗೆ ಮನೋವೈದ್ಯನಿಂದ ಮೊಬೈಲ್ ಸಪ್ಲೈ – ಶಂಕಿತ ಉಗ್ರರು 6 ದಿನ ಎನ್ಐಎ ಕಸ್ಟಡಿಗೆ
ಈ ಸಂಚು ರೂಪಿಸಲು ಎಎಸ್ಐ ಚಾಂದ್ ಪಾಷಾ ನೆರವು ನೀಡುವುದಾಗಿ ಹೇಳಿದ್ದ. ಸಿಎಆರ್ ಉತ್ತರ ವಿಭಾಗದಲ್ಲಿರುವ ಚಾಂದ್ ಪಾಷಾ ನಾಸೀರ್ನನ್ನು ಬೆಂಗಳೂರು, ಕೇರಳ ಹಾಗೂ ಇತರೇ ರಾಜ್ಯಗಳ ಕೋರ್ಟ್ಗೆ ಕರೆದೊಯ್ಯುವ ಮಾಹಿತಿಯನ್ನು ಸಂಘಟನೆಯ ಕೆಲವು ವ್ಯಕ್ತಿಗಳು ಹಾಗೂ ಮುಂಗಡವಾಗಿ ಟಿ.ನಾಸೀರ್ಗೂ ನೀಡುತ್ತಿದ್ದ. ಇದಕ್ಕಾಗಿ ಚಾಂದ್ ಪಾಷಾಗೆ ನಾಸೀರ್ ಕಡೆಯಿಂದ ಹಣ ಸಂದಾಯವಾಗುತ್ತಿತ್ತು.
ನಾಸೀರ್ ಬಂದೋಬಸ್ತ್ಗೆ ನಿಯೋಜನೆಗೊಂಡಿದ್ದರಿಂದ ಚಾನ್ ಪಾಷಾಗೆ ವಾಹನದ ರೂಟ್ ಮ್ಯಾಪ್ ಎಲ್ಲವೂ ಚೆನ್ನಾಗಿ ಗೊತ್ತಿತ್ತು. ನಾಸೀರ್ ಜೀಪ್ ಹತ್ತಿಸಿ ವಾಹನ ಬರುತ್ತಿದ್ದಂತೆ ಬಾಂಬ್ ಸ್ಫೋಟಿಸಬೇಕು. ಪ್ರತಿ ಮಾಹಿತಿ ನಾನು ನೀಡುತ್ತೇನೆ ಎಂದು ಜುನೈದ್ ಅಹಮದ್ ಟೀಂಗೆ ಚಾನ್ ಪಾಷಾ ಹೇಳಿದ್ದ. ಈ ಪ್ಲ್ಯಾನ್ನಂತೆ ಜುನೈದ್ ತಂಡ ಬಾಂಬ್ ಸ್ಫೋಟಿಸಲು ಸಂಚು ಮಾಡುತ್ತಿತ್ತು. ಆದರೆ 2023 ರಲ್ಲಿ ಖಚಿತ ಮಾಹಿತಿ ಮೇರೆಗೆ ಜುನೈದ್ ತಂಡದ ಚಟುವಟಿಕೆ ತಿಳಿದು ಈ ಯೋಜನೆಯನ್ನು ಸಿಸಿಬಿ ಪೊಲೀಸರು ವಿಫಲಗೊಳಿಸಿದ್ದರು.
ಈ ಬಾರಿಯೂ ಅದೇ ರೀತಿ ಸಂಚು ಹೂಡಿದ್ದ ಶಂಕೆ ವ್ಯಕ್ತವಾಗಿದ್ದು ಬಂಧಿತ ಮೂವರನ್ನು ಎನ್ಐಎ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಜನನಿಬಿಡ ಸ್ಥಳದಲ್ಲಿ ಸ್ಫೋಟಕ್ಕೆ ಸಂಚು– ಸಿಸಿಬಿಯಿಂದ ಐವರು ಅರೆಸ್ಟ್
ಎಲ್ಲಿದ್ದಾನೆ ಜುನೈದ್?
ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಿ, ಭಾರಿ ಅನಾಹುತ ಎಸಗಲು ಸಂಚು ರೂಪಿಸಿದ್ದ ಖಚಿತ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಜುಲೈ 23, 2023 ರಲ್ಲಿ ಸುಲ್ತಾನ್ಪಾಳ್ಯ, ಡಿ.ಜೆ.ಹಳ್ಳಿ, ಆರ್.ಟಿ.ನಗರ, ಕೊಡಿಗೇಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿ ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಸ್, ಸೈಯದ್ ಮುದಾಸೀರ್ ಪಾಷಾ, ಮಹಮದ್ ಫೈಸಲ್, ಮಹಮದ್ ಉಮರ್ನನ್ನು ಬಂಧಿಸಿದ್ದರು.
ಜೈಲಿನಲ್ಲಿದ್ದ ಐವರಿಗೆ ಟಿ. ನಾಸೀರ್ ಉಗ್ರ ಚಟುವಟಿಕೆಗಳ ಬಗ್ಗೆ ತರಬೇತಿ ನೀಡುತ್ತಿದ್ದ. 7 ನಾಡ ಬಂದೂಕು, 45 ಗುಂಡುಗಳು, ಸ್ಯಾಟ್ಲೈಟ್ ಫೋನ್ ಮಾದರಿಯ ವಾಕಿಟಾಕಿಗಳು, 12 ಮೊಬೈಲ್, ಡ್ರಾಗರ್ ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಪ್ರಕರಣದ ಪ್ರಮುಖ ಸೂತ್ರಧಾರ ಜುನೈದ್ ಅಹಮದ್ ದುಬೈಗೆ ಪರಾರಿಯಾಗಿದ್ದಾನೆ. ಶಂಕಿತ ಉಗ್ರ ಜುನೈದ್ ಅಹಮದ್ನ ತಾಯಿ ಅನೀಸ್ ಫಾತಿಮಾಳನ್ನು ಎನ್ಐಎ ಈಗ ಬಂಧಿಸಿದೆ.