ಆಸ್ಪತ್ರೆಯಲ್ಲಿದ್ದ ಅಭಿಷೇಕ್ ಕಣ್ಣಲ್ಲಿ ಒಂದು ತೊಟ್ಟು ನೀರಿರಲಿಲ್ಲ ಏಕೆ ಅನ್ನೋದನ್ನು ರಿವೀಲ್ ಮಾಡಿ ಭಾವುಕರಾದ ಸಿಎಂ

Public TV
3 Min Read

ಬೆಂಗಳೂರು: ನಟ, ರೆಬೆಲ್ ಸ್ಟಾರ್ ಸಾವಿನ ಸುದ್ದಿ ನನಗೆ ಅಘಾತ ತಂದಿತ್ತು. ಕೂಡಲೇ ನಾನು ಆಸ್ಪತ್ರೆ ಬಳಿ ತೆರಳಿದೆ. ಆಗ ಅಭಿಷೇಕ್ ಅವರ ಕಣ್ಣಲ್ಲಿ ಒಂದು ತೊಟ್ಟು ನೀರು ಇರಲಿಲ್ಲ ಎಂದು ಅಂದಿನ ದಿನವನ್ನು ಸಿಎಂ ಕುಮಾರಸ್ವಾಮಿ ನೆನಪು ಮಾಡಿಕೊಂಡು ಭಾವುಕರಾದರು.

ನಗರದ ಅಂಬೇಡ್ಕರ್ ಭವನದಲ್ಲಿ ಅಂಬಿ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಸಿಎಂ ಆಗಿದ್ದಾಗ ಇಬ್ಬರು ಗಣ್ಯರು ನಮ್ಮನ್ನು ಬಿಟ್ಟು ಹೋದರು. ಇಬ್ಬರ ಅಂತಿಮ ಕಾರ್ಯ ನಡೆಸುವ ಅವಕಾಶ ನನಗೆ ಲಭಿಸಿತು. ಇದು ಅದೃಷ್ಟವೋ, ಶಾಪವೋ ಗೊತ್ತಿಲ್ಲ. ನನ್ನ ತಂದೆ ತಾಯಿ ಬಿಟ್ಟರೆ ನನಗೆ ನನ್ನ ಜೀವನದಲ್ಲಿ ಪ್ರೇರಣೆಯಾಗಿದ್ದು ರಾಜ್ ಸಿನಿಮಾಗಳು. ಡಾ. ರಾಜ್‍ಕುಮಾರ್ ನಿಧನರಾದಾಗಲೂ ಹಲವು ಗೊಂದಲಗಳಿದ್ದವು. ಆಸ್ಪತ್ರೆಯಿಂದ ನನ್ನ ಗಮನಕ್ಕೆ ಯಾವುದೇ ಸುದ್ದಿ ತಿಳಿದಿರಲಿಲ್ಲ. ಅಷ್ಟರಲ್ಲೇ ಸುದ್ದಿ ಕಾಡ್ಗಿಚ್ಚಿನಂತೆ ಹರಿದು ರಾಜ್ ನಿವಾಸದ ಮುಂದೆ ಅಭಿಮಾನಿಗಳ ಸಾಗರವೇ ಸೇರಿತ್ತು. ಹಾಗೇ ಅಂಬರೀಶ್ ಸಾವಿನ ಸುದ್ದಿ ಕೇಳಿ ಅಘಾತಗೊಂಡು ಆಸ್ಪತ್ರೆಗೆ ತೆರಳಿದೆ. ಆಗ ಅಭಿಷೇಕ್ ಅವರ ಕಣ್ಣಲ್ಲಿ ಒಂದು ತೊಟ್ಟು ನೀರಿರಲಿಲ್ಲ. ಧೈರ್ಯವಾಗಿ ನಿಂತಿದ್ದರು. ನಾನು ಏಕೆ ಇಷ್ಟು ಧೈರ್ಯವಾಗಿ ಇದ್ದೀಯಾ ಎಂದು ಅಭಿಷೇಕ್‍ಗೆ ಕೇಳಿದೆ. ಅದಕ್ಕೆ ನಾನು ಜಾಸ್ತಿ ರೋಧಿಸಿದ್ರೆ ಅಮ್ಮನಿಗೆ ಮತ್ತಷ್ಟು ದುಃಖವಾಗುತ್ತದೆ ಎಂದು ಹೇಳಿದರು. ಈ ಮಾತು ಕೇಳಿ ನಾನು ಮತ್ತಷ್ಟು ಭಾವುಕನಾದೆ ಎಂದರು.

ನಾನು ಚಿತ್ರರಂಗದಿಂದ ಬಂದವನು. ಅಂಬರೀಶ್ ನಮಗೆ ಅಣ್ಣನಂತೆ ಇದ್ದರು. ಸ್ನೇಹ ಎಂದರೆ ಅಂಬಿ ಅವರಿಂದಲೇ ನನಗೆ ತಿಳಿಯಿತು. ಅವರ ಅಂತಿಮ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿದ್ದು, ಇದಕ್ಕೆ ಕಾರಣ ಅಂಬಿ ಒಳ್ಳೆಯ ಗುಣ ಕಾರಣ. ಅದ್ದರಿಂದಲೇ ಎಲ್ಲವೂ ಸುಸೂತ್ರವಾಗಿ ನಡೆಯಿತು. ನನಗೆ ನಿಖಿಲ್ ಮತ್ತು ಅಂಬರೀಶ್ ಸೇರಿಸಿ ಒಟ್ಟಿಗೆ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಆದರೆ ರಾಜಕೀಯ ಒತ್ತಡಗಳಿಂದ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ ಎಂದರು.

ಅಂಬಿ ನನಗೆ ಫೋನ್ ಮಾಡಿ ನನ್ನ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡಿದ್ದರು. ಆಗ ನಾನು ಅವರ ಆರೋಗ್ಯ ಬಗ್ಗೆ ನೋಡಿಕೊಳ್ಳುವಂತೆ ಸಲಹೆ ನೀಡಿದ್ದೆ ಎಂದರು. ಇದೇ ವೇಳೆ ಅಂಬರೀಶ್ ಅವರ ಅಂತಿಮ ಕಾರ್ಯಗಳು ಯಾವುದೇ ಗೊಂದಲವಿಲ್ಲದೇ ನಡೆಯಲು ಪ್ರಮುಖ ಕಾರಣ ಅವರ ಅಭಿಮಾನಿಗಳು. ಮಂಡ್ಯದಲ್ಲೂ ಅಭಿಮಾನಿಗಳು ಶಾಂತಿಯಿಂದ ವರ್ತನೆ ಮಾಡಿದರು. ಅಲ್ಲದೇ ಬೆಂಗಳೂರಿನ ಅಭಿಮಾನಿಗಳು ಮೆರವಣಿಗೆ ವೇಳೆಯೂ ಸಹಕಾರ ನೀಡಿದರು. ಅವರ ಈ ಸಹಕಾರಕ್ಕೆ ಧನ್ಯವಾದ ಎಂದು ತಿಳಿಸಿದರು.

ಮೈಸೂರಿನಲ್ಲೇ ಫಿಲ್ಮ್ ಸಿಟಿ: ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತನ್ನು ಪ್ರಸ್ತಾಪಿಸಿದ ಸಿಎಂ ಎಚ್‍ಡಿಕೆ ಅವರು, ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಆಗಬೇಕು ಎಂದು ಮನವಿ ಮಾಡಿದ್ದಾರೆ. ಹಲವರ ಬೇಡಿಕೆ ಇದಾಗಿದೆ. ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುವ ಯೋಚನೆ ನಮ್ಮ ಮುಂದಿದೆ. ಅದನ್ನು ಬದಲಾವಣೆ ಮಾಡಿಲ್ಲ. ಆದರೆ ರಾಮನಗರದಲ್ಲಿ ಫಿಲ್ಮ್ ವಿಶ್ವವಿದ್ಯಾಲಯ ಮಾಡೋಣ ಎಂಬ ಚಿಂತನೆ ಇದೆ. ಕನ್ನಡ ಸಿನಿಮಾ ರಂಗದ ಬಗ್ಗೆ ನನಗೆ ಬಹಳ ದೂರಾಲೋಚನೆ ಇದೆ. ಬೇರೆ ಭಾಷೆಗಳಿಗೆ, ಭಾರತದಲ್ಲಿ ಕನ್ನಡ ಸಿನಿಮಾ ಮತ್ತಷ್ಟು ಉತ್ತಮ ಯಶಸ್ಸು ಗಳಿಸಬೇಕು. ಆ ಕುರಿತು ನಮ್ಮ ಸರ್ಕಾರದ ಕಾರ್ಯ ಮುಂದುವರಿಯುತ್ತದೆ ಎಂದು ಆಶ್ವಾಸನೆ ನೀಡಿದರು.

ವಿಷ್ಣು, ರಾಜ್‍ಕುಮಾರ್, ಅಂಬಿ ಅವರ ವ್ಯಕ್ತಿತ್ವ ಒಂದೇ ರೀತಿ ಇತ್ತು. ಅದ್ದರಿಂದ ಎಲ್ಲರಿಗೂ ಸಮಾನ ಗೌರವ ನೀಡಲಾಗುವುದು. ಇದರಲ್ಲಿ ಸರ್ಕಾರದಿಂದ ಲೋಪ ಆಗುವುದಿಲ್ಲ. ಆದರೆ ಈ ಕುರಿತು ಸರ್ಕಾರವನ್ನು ಪ್ರಶ್ನೆ ಮಾಡುವ ವೇಳೆ ಸ್ವಲ್ಪ ತಾಳ್ಮೆ ವಹಿಸಿ ಅಷ್ಟೇ. ಸರ್ಕಾರ ಎಂದಿಗೂ ಈ ವಿಚಾರದಲ್ಲಿ ಹಿಂದೆ ಉಳಿಯುದಿಲ್ಲ. ಅದಷ್ಟು ಶೀಘ್ರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾವುದು ಎಂದರು.

https://www.youtube.com/watch?v=-LM0X2q1GO8

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *