ಲಕ್ನೋ: ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 18 ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಶಹಜಹಾನ್ಪುರದ ನ್ಯಾಯಾಲಯ ಆದೇಶ ಹೊರಡಿಸಿದೆ.
18 ವರ್ಷಗಳ ಹಿಂದೆ ಇಬ್ಬರನ್ನು ನಕಲಿ ಎನ್ಕೌಂಟರ್ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಮೇರೆಗೆ ಜಲಾಲಾಬಾದ್ನಲ್ಲಿ 18 ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಎಸ್ಪಿ ಎಸ್.ಆನಂದ್ ತಿಳಿಸಿದ್ದಾರೆ. ಇದನ್ನೂ ಓದಿ: ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಸೋನು ಸೂದ್ ಕಾರು ಜಪ್ತಿ
2004ರ ಅಕ್ಟೋಬರ್ 3ರಂದು ಜಲಾಲಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಚಚುಪುರದ ಗ್ರಾಮದ ನಿವಾಸಿಗಳಾದ ಪ್ರಹ್ಲಾದ್ ಮತ್ತು ಧನಪಾಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ನಂತರ ಅವರಿಗೆ ಡಕಾಯಿತರು ಎಂಬ ಹಣಪಟ್ಟಿ ಕಟ್ಟಲಾಗಿತ್ತು.
ಪ್ರಹ್ಲಾದ್ ಸಹೋದರ ರಾಮ್ ಕೀರ್ತಿ ಈ ಸಂಬಂಧ ದೂರು ನೀಡಿದ್ದರು. ಆದರೆ ಯಾವುದೇ ವಿಚಾರಣೆ ನಡೆಯದ ಕಾರಣ 2012ರ ನವೆಂಬರ್ ತಿಂಗಳಲ್ಲಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನೂ ಓದಿ: ಬಾಲಿವುಡ್ ಅಪಹಾಸ್ಯ – ಕೆಆರ್ಕೆ, ಅಭಿಷೇಕ್ ಬಚ್ಚನ್ ರೋಚಕ ಟ್ವೀಟ್ ಸಮರ!
ಆಗಿನ ಎಸ್ಪಿ ಸುಶೀಲ್ ಕುಮಾರ್, ಹೆಚ್ಚುವರಿ ಎಸ್ಪಿ ಮಾತಾ ಪ್ರಸಾದ್, ಮುಮ್ಮು ಲಾಲ್, ಜೈಕರನ್ ಸಿಂಗ್ ಭದೌರಿಯಾ, ಆರ್.ಕೆ.ಸಿಂಗ್ ಸೇರಿದಂತೆ 18 ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ.