ಪಾಕ್ ಗಡಿ ಬಳಿಯೇ ವಾಯುಪಡೆ ಶಕ್ತಿ ಪ್ರದರ್ಶನ – ಎಚ್ಚರಿಕೆ ಸಂದೇಶ ರವಾನಿಸಿದ ಭಾರತ – ವಿಡಿಯೋ ನೋಡಿ

Public TV
1 Min Read

ಪೋಖ್ರಾನ್: ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಇತ್ತ ಪಾಕಿಸ್ತಾನ ಗಡಿಯಲ್ಲಿ ಭಾರತೀಯ ವಾಯಸೇನೆ ತನ್ನ ಶಕ್ತಿ ಪ್ರದರ್ಶನ ಮಾಡಿದೆ.

ಅಣ್ವಸ್ತ್ರ ಪರೀಕ್ಷಾರ್ಥ ಪ್ರಯೋಗ ನಡೆದಿದ್ದ ರಾಜಸ್ಥಾನ ರಾಜ್ಯದ ಪೋಖ್ರಾನ್ ಮರುಭೂಮಿಯಲ್ಲಿ ಯುದ್ಧ ವಿಮಾನಗಳು ಅಬ್ಬರಿಸಿವೆ. ನಿರ್ದೇಶಿತ ಕ್ಷಿಪಣಿ ಪ್ರಯೋಗ ಮೂಲಕ ಆರ್ಭಟಿಸಿದ್ದು, ಈ ಮೂಲಕ ವೈರಿ ಪಾಕಿಸ್ತಾನಕ್ಕೆ ಭಾರತ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ.

ಪಾಕಿಸ್ತಾನದ ಗಡಿಯಲ್ಲೇ ನಡೆದ ಪ್ರದರ್ಶನದಲ್ಲಿ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳು ಭಾಗವಹಿಸಿದ್ದವು. ಪ್ರಮುಖವಾಗಿ ತೇಜಸ್, ಹಾಂಕ್ ಎಂಕೆ-132, ನೆಲದಿಂದ ಆಕಾಶಕ್ಕೆ ಮತ್ತು ಆಗಸದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಯನ್ನು ಪ್ರಯೋಗಿಸಲಾಯಿತು. ಈ ವೇಳೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಅಧಿಕಾರಿಗಳು ಹಾಗೂ ಐಎಎಫ್ ಗೌರವಾನ್ವಿತ ಸಮೂಹ ಕ್ಯಾಪ್ಟನ್, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ಭಾಗವಹಿಸಿದ್ದರು. ಈ ಪ್ರದರ್ಶನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಇತ್ತ ಪುಲ್ವಾಮಾ ದಾಳಿ ವಿಚಾರದಲ್ಲಿ ಇಡೀ ದೇಶ ಒಂದಾಗಿದೆ. ಈ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ಧ್ವನಿ ಹೊರಡಿಸಿವೆ. ಇಂದು ದೆಹಲಿಯಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ ಭಯೋತ್ಪಾದಕ ದಾಳಿಯನ್ನು ಸರ್ವಾನುಮತದಿಂದ ಖಂಡಿಸಿವೆ. ಭಯೋತ್ಪಾದನೆ ದಮನಕ್ಕಾಗಿ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಬೆಂಬಲ ಘೋಷಿಸಿವೆ. ಹುತಾತ್ಮರ ಕುಟುಂಬಗಳ ದು:ಖದಲ್ಲಿ ಭಾಗಿಯಾಗುವುದಾಗಿ ತಿಳಿಸಿವೆ.

ಸರ್ವಪಕ್ಷ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಈ ದುರ್ಘಟನೆಗೆ ಕಾರಣರಾದವರೂ ಯಾರೇ ಆಗಿರಲಿ, ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಎಲ್ಲ ಪಕ್ಷಗಳೂ ಒಮ್ಮತ ತೀರ್ಮಾನಕ್ಕೆ ಬಂದಿವೆ ಎಂದು ತಿಳಿಸಿದರು. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮಾತನಾಡಿ, ಸರ್ಕಾರದ ಜೊತೆ ಭಿನ್ನಾಭಿಪ್ರಾಯ ಇರಬಹುದು. ಆದರೆ ದೇಶದ ಹಿತಾಸಕ್ತಿ, ಭದ್ರತೆ ವಿಚಾರದಲ್ಲಿ ಸರ್ಕಾರದ ಜೊತೆ ನಿಲ್ಲುತ್ತೇವೆ, ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *