ರಾಮನಗರ: ಹಲವು ವಿಶೇಷತೆಗಳಿಂದ ಇಡೀ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರ ಬೊಂಬೆನಗರಿ ಚನ್ನಪಟ್ಟಣ. ಈಗಾಗಲೇ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಪ್ರಬಲ ನಾಯಕರೇ ಸ್ಪರ್ಧೆ ಮಾಡಿರೋದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಎಲ್ಲದರ ನಡುವೆ ಮುಸ್ಲಿಂ ಧರ್ಮಗುರು ಒಬ್ಬರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಫತ್ವಾ ಹೊರಡಿಸಿದ್ದಾರೆ.
ಫಾರುಖ್ ಮುಲ್ಲಾ ಫತ್ವಾ ಹೊರಡಿಸಿದ ಧರ್ಮಗುರು. ಕ್ರಮ ಸಂಖ್ಯೆ 3ರ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣಗೆ ಮತ ನೀಡಬೇಕೆಂದು ತಮ್ಮ ಸಮುದಾಯದ ಜನರಿಗೆ ಸೂಚಿಸಿದ್ದಾರೆ. ಅಲ್ಲದೇ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಸಹ ಒಂದೇ ಆಗಿವೆ. ಕೋಮುವಾದಿ ಬಿಜೆಪಿಯನ್ನ ಬೆಂಬಲಿಸದಂತೆ ಸೂಚನೆ ನೀಡಿದ್ದಾರೆ. ರೇವಣ್ಣಗೆ ಅಹಿಂದ ಮತ ಹಾಕುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವಂತೆ ತಿಳಿಸಿದ್ದಾರೆ.
ಚನ್ನಪಟ್ಟಣದಲ್ಲಿ ಒಕ್ಕಲಿಗ ಮತದಾರರ ಬಳಿಕ ಮುಸ್ಲಿಂ ಮತದಾರರ ಪಾತ್ರ ನಿರ್ಣಾಯಕವಾಗಿದೆ. ಹೀಗಾಗಿ ಧರ್ಮಗುರುಗಳು ಹೊರಡಿಸಿರುವ ಫತ್ವಾವನ್ನು ಮುಸ್ಲಿಂ ಸಮುದಾಯದ ಜನರು ಪಾಲನೆ ಮಾಡ್ತಾರಾ ಎಂಬ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಈ ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಎಚ್.ಎಂ.ರೇವಣ್ಣ ಸ್ಪರ್ಧೆ ಮಾಡಿದ್ರೆ, ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಮತ್ತು ಜೆಡಿಎಸ್ ನಿಂದ ಹೆಚ್.ಡಿ.ಕುಮಾರಸ್ವಾಮಿ ಕಣದಲ್ಲಿದ್ದಾರೆ.