ಹಾಸನ: ಮದ್ಯಪಾನ ಮಾಡಿದ ಅಪ್ಪನಿಂದಲೇ ಮಗನಿಗೆ ಗುಂಡೇಟು ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಗ ಮೃತಪಟ್ಟಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಸುಲಗಳಲೆ ಗ್ರಾಮದಲ್ಲಿ ನಡೆದಿದೆ.
ಮಗ ಉಮೇಶ್ ಮೃತ ದುರ್ದೈವಿ. ಆರೋಪಿ ಅಪ್ಪ ಬಸಪ್ಪಗೌಡ ಕಾಫಿ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಉಮೇಶ್ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮ ಗುಂಡು ಮಗನ ಎದೆ ಸೀಳಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಇಂದು ಬೆಳಗ್ಗೆ ಮೃತ ಉಮೇಶ್ ಮನೆ ಮುಂದಿನ ಆವರಣದಲ್ಲಿ ಒಣಗಿಸುತ್ತಿದ್ದ ಕಾಫಿಯನ್ನು ಚೀಲಕ್ಕೆ ಕೆಲಸಗಾರರ ಸಹಾಯದಿಂದ ತುಂಬುತ್ತಿದ್ದನು. ಈ ವೇಳೆ ಕುಡಿದು ಬಂದಿದ್ದ ಅಪ್ಪ ಕಾಫಿ ಮಾರಾಟಕ್ಕೆ ಸಂಬಂಧಿಸಿದಂತೆ ಜಗಳ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಕೋಪಗೊಂಡ ಆರೋಪಿ ಬಸಪ್ಪಗೌಡ ಮನೆಯಲ್ಲಿದ್ದ ಲೈಸೆನ್ಸ್ ಗನ್ ತಂದು ಮಗನ ಎದೆಗೆ ಗುಂಡು ಹಾರಿಸಿದ್ದಾನೆ.
ಈ ಸಂದರ್ಭದಲ್ಲಿ ಮೃತ ಉಮೇಶ್ ತಾಯಿ ಕಾಫಿ ತೋಟದೊಳಗೆ ಕೆಲಸ ಮಾಡುತ್ತಿದ್ದರು. ತಕ್ಷಣ ಕೆಲಸಗಾರರು ತಾಲೂಕಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಉಮೇಶ್ ಎದೆಗೆ ಗುಂಡೇಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಈ ಬಗ್ಗೆ ತಿಳಿದು ಘಟನೆ ನಡೆದ ಸ್ಥಳಕ್ಕೆ ಅರೇಹಳ್ಳಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇತ್ತ ಘಟನೆಯ ಬಳಿಕ ಆರೋಪಿ ತಂದೆ ಬಸಪ್ಪಗೌಡ ಪರಾರಿಯಾಗಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv