ಕೊಟ್ಟ ಭರವಸೆ ಮರೆತ ಸಿಎಂ ಎಚ್‍ಡಿಕೆ- ರಾತ್ರೋರಾತ್ರಿ ಸಿಎಂ ವಿರುದ್ಧ ಸಿಡಿದೆದ್ದ ರೈತರು

Public TV
1 Min Read

ಬೆಳಗಾವಿ: ಸಿಎಂ ಕುಮಾರಸ್ವಾಮಿ ನೀಡಿದ್ದ ಭರವಸೆ ನಂಬಿ ಪ್ರತಿಭಟನೆ ಹಿಂಪಡೆದಿದ್ದ ಬೆಳಗಾವಿ ರೈತರು ಮತ್ತೆ ಸಿಡಿದೆದ್ದಿದ್ದು, ಕಬ್ಬು ಬಾಕಿ ಪಾವತಿ ಮತ್ತು ಸೂಕ್ತ ಬೆಲೆ ನಿಗದಿಗಾಗಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

ಈ ಹಿಂದೆ ಸಿಎಂ ಕುಮಾರಸ್ವಾಮಿ ಸೋಮವಾರ ಬೆಳಗಾವಿಗೆ ಆಗಮಿಸಿ ಸಭೆ ನಡೆಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ವಾಪಸ್ ಪಡೆದಿದ್ದರು. ಆದರೆ ತಮ್ಮ ಪ್ರವಾಸ ರದ್ದುಪಡಿಸಿರುವ ಸಿಎಂ ಬೆಂಗಳೂರಲ್ಲೇ ಕಬ್ಬು ಬೆಳೆಗಾರರ ಸಭೆ ಕರೆದಿದ್ದಾರೆ. ಇದರಿಂದ ಪ್ರತಿಭಟನೆ ಕೈಬಿಟ್ಟು ಕೊಂಚ ತಣ್ಣಗಾಗಿದ್ದ ರೈತರ ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ.

ಕೊಟ್ಟ ಮಾತಿನಂತೆ ಬೆಳಗಾವಿಯಲ್ಲಿ ರೈತರ ಸಭೆ ನಡೆಸಬೇಕು ಎಂದು ಆಗ್ರಹಿಸಿ ಇಂದು ಜಿಲ್ಲೆಯ ಚಿಕ್ಕೋಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆಗೆ ರೈತರು ಸಜ್ಜಾಗಿದ್ದಾರೆ. ಅಲ್ಲದೇ ಪ್ರತಿಭಟನೆ ಕಾವು ಬಾಗಲಕೋಟೆಗೂ ತಟ್ಟಿದ್ದು, ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ನಿರಾಣಿ ಶುಗರ್ಸ್ ಸಕ್ಕರೆ ಕಾರ್ಖಾನೆಗೆ ಸಾಗಿಸುತ್ತಿದ್ದ ಐದು ಟ್ರ್ಯಾಕ್ಟರ್ ಗಳಲ್ಲಿ ತುಂಬಿದ್ದ ಕಬ್ಬನ್ನು ರಸ್ತೆಗೆ ಚೆಲ್ಲಿ ರೈತರು ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನೆ ವೇಲೆ ನಿರಾಣಿ ಶುಗರ್ಸ್‍ಗೆ ಸೇರಿದ ವಾಹನಕ್ಕೂ ಕಲ್ಲೇಟು ಬಿದ್ದಿದ್ದು, ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್‍ಗಳನ್ನು ರಸ್ತೆಯಲ್ಲೇ ತಡೆದಿದ್ದಾರೆ.

ಕಬ್ಬು ಬೆಳೆಗಾರರ ಜೊತೆ ಬೆಳಗಾವಿಯಲ್ಲಿ ಸಭೆ ನಿಗದಿ ಮಾಡಿದ್ದ ಸಿಎಂ ಶನಿವಾರ ಕಬ್ಬು ಬೆಳೆಗಾರರನ್ನೇ ಬೆಂಗಳೂರಿಗೆ ಆಹ್ವಾನಿಸಿದ್ದರು. ಅಲ್ಲದೇ ಮಂಗಳವಾರ ರಾಜ್ಯದ ಎಲ್ಲ ಕಬ್ಬು ಬೆಳೆಗಾರರೊಂದಿಗೆ ಬೆಂಗಳೂರಿನಲ್ಲೇ ಸಭೆ ನಡೆಸಲು ತೀರ್ಮಾನ ಮಾಡಲಾಗಿತ್ತು. ಬೆಳಗಾವಿ, ಬೀದರ್, ಬಾಗಲಕೋಟೆ, ಬಿಜಾಪುರ ಜಿಲ್ಲೆ ಕಬ್ಬು ಬೆಳೆಗಾರರೊಂದಿಗೆ ಸಿಎಂ ಸಭೆ ನಿಗದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *