ಇನ್ನೂ ತಪ್ಪಿಲ್ಲ ರೈತರಿಗೆ ಬ್ಯಾಂಕ್ ನೋಟಿಸ್ ಕಾಟ- ಗಗನಕ್ಕೇರುತ್ತಲಿದೆ ಬಡ್ಡಿ

Public TV
2 Min Read

ಹುಬ್ಬಳ್ಳಿ: ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ರೈತರ ಸಾಲ ಮನ್ನಾ ಯೋಜನೆ ಹುಟ್ಟುಹಾಕಿರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಬ್ಯಾಂಕ್‍ಗಳಿಂದ ರೈತರಿಗೆ ಇನ್ನೂ ನೋಟಿಸ್ ಬರುತ್ತಿದ್ದು, ಇದರಿಂದ ಹೊಸ ಸರ್ಕಾರ ಬಂದರೂ ಬ್ಯಾಂಕ್‍ಗಳಿಂದ ನೋಟಿಸ್ ನೀಡುವುದು ಮಾತ್ರ ನಿಂತಿಲ್ಲ ಎಂದು ರೈತರು ಆತಂಕಕ್ಕೊಳಗಾಗಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷದಿಂದ ಮಳೆ ಕೈ ಕೊಟ್ಟಿತ್ತು, ಈ ವರ್ಷ ಪ್ರವಾಹದಿಂದ ಅತೀವೃಷ್ಠಿ ಉಂಟಾಗಿದೆ. ಇಂತಹ ಸಂದರ್ಭದಲ್ಲೇ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸುತ್ತಮುತ್ತಲ ಗ್ರಾಮಗಳ ಹತ್ತಾರು ರೈತರಿಗೆ ಬ್ಯಾಂಕ್ ನೋಟಿಸ್ ಬರುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಸಾಲಮನ್ನಾ ಆಗುವ ಸಂತಸದಲ್ಲಿದ್ದ ರೈತರೀಗ ಬ್ಯಾಂಕ್ ನೋಟಿಸ್ ನೋಡಿ ಆತಂಕಗೊಂಡಿದ್ದು, ಒಂದು ಕಡೆ ಸಾಲ ಮನ್ನಾ ಆಗಿಲ್ಲ, ಇನ್ನೊಂದೆಡೆ ಬಡ್ಡಿ ದುಪ್ಪಟ್ಟಾಗಿದೆ. ರೈತರೆಲ್ಲ ಪ್ರತಿ ವರ್ಷ ತಾವು ಪಡೆದ ಬೆಳೆಸಾಲದ ಬಡ್ಡಿ ತುಂಬಿ ನವೀಕರಣ ಮಾಡಿಕೊಳ್ಳುತ್ತಿದ್ದರು. ಸರ್ಕಾರದ ಸಾಲಮನ್ನಾ ಘೋಷಣೆ ನಂಬಿ ಕಳೆದ ವರ್ಷದಿಂದ ಸಾಲ ನವೀಕರಣ ಮಾಡಿಕೊಂಡಿರಲಿಲ್ಲ. ಅಲ್ಲದೇ ನವೀಕರಣ ಮಾಡಲು ಬಡ್ಡಿಯನ್ನು ಸಹ ಬ್ಯಾಂಕ್ ಸಿಬ್ಬಂದಿ ತುಂಬಿಸಿಕೊಂಡಿರಲಿಲ್ಲ.

ರೈತರು ಪಡೆದ ಸಾಲದಲ್ಲಿ ಕೇವಲ 25 ಸಾವಿರ ರೂ. ಮಾತ್ರ ಮನ್ನಾ ಆಗಿದ್ದು, ಉಳಿದ ಬೆಳೆ ಸಾಲಕ್ಕೆ ಬ್ಯಾಂಕ್‍ಗಳು ಶೇ.14ರಷ್ಟು ಬಡ್ಡಿ ವಿಧಿಸಿ ನೋಟಿಸ್ ನೀಡುತ್ತಿವೆ. ಯಾರು ಬೆಳೆ ಸಾಲ ನವೀಕರಣ ಮಾಡಿಕೊಳ್ಳುತ್ತಿದ್ದರೋ ಅಂಥವರಿಗೆ 25 ಸಾವಿರ ರು. ಮನ್ನಾ ಮಾಡಲಾಗಿದೆ. ಈ ಕುರಿತು ಬಹುತೇಕ ರೈತರಿಗೆ ಸರಿಯಾದ ಮಾಹಿತಿಯೇ ಇಲ್ಲ. ಜೊತೆಗೆ ಆ ರೀತಿಯ ನಿಯಮಾವಳಿ ಇದ್ದರೆ ಋಣಮುಕ್ತ ಪತ್ರ ಮನೆಗೆ ಕಳುಹಿಸಿ ಯಾಕೆ ಮೋಸ ಮಾಡಬೇಕಿತ್ತು ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಡ್ಡಿ ಶೇ.4 ರಿಂದ 14ಕ್ಕೆ ಏರಿಕೆ: ಪ್ರತಿ ವರ್ಷದಂತೆ ಬೆಳೆಸಾಲ ನವೀಕರಣ ಮಾಡಿಕೊಂಡಿದ್ದರೆ ರೈತರು ಶೇ.4ರ ಪ್ರಮಾಣದಲ್ಲಿ ಬಡ್ಡಿ ತುಂಬಬೇಕಾಗಿತ್ತು. ಇದೀಗ ಕಟ್ಟಬಾಕಿ ಇರುವ ಹಿನ್ನೆಲೆ ಶೇ.14 ರಷ್ಟು ಡ್ಡಿ ತುಂಬಬೇಕು. ಇದೀಗ ಕೇವಲ 25 ಸಾವಿರ ರೂ. ಮಾತ್ರ ಸಾಲಮನ್ನಾ ಮಾಡಿದ್ದಾರೆ. ಈ ಬಗ್ಗೆ ಬ್ಯಾಂಕ್‍ನಲ್ಲಿ ವಿಚಾರಿಸಿದರೆ ಸರ್ಕಾರವನ್ನೇ ಕೇಳಿ ಎನ್ನುತ್ತಾರೆ. 5 ಲಕ್ಷ ರೂ. ಸಾಲ ಪಡೆದಿದ್ದು ಅದೀಗ 6,08,642 ರೂ. ಆಗಿದೆ. 1.80 ಲಕ್ಷ ರೂ. ಬಡ್ಡಿ ರೂಪದಲ್ಲಿದ್ದು, ಸರ್ಕಾರ ಸಾಲ ಮನ್ನಾ ಮಾಡಿರುವುದು ಯಾರ ಲಾಭಕ್ಕೆ ಎಂದು ರೈತರು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *