ಸದ್ಯಕ್ಕೆ ಸಾಲ ಮನ್ನಾ ಇಲ್ಲ: ಸಿದ್ದರಾಮಯ್ಯ

Public TV
2 Min Read

-ಪ್ರತಾಪ್ ಸಿಂಹ ಅರೆಜ್ಞಾನ ಹೊಂದಿದ್ದಾರೆ ಎಂದ ಸಿಎಂ

ನವದೆಹಲಿ: ಟ್ಯಾಂಕರ್‍ಗಳ ಮೂಲಕ ನೀರನ್ನು ನೀಡುತ್ತಿದ್ದೇವೆ ಹಾಗು ಹಸುಗಳಿಗೆ ಸಹ ಮೇವನ್ನು ನೀಡಲಾಗುತ್ತಿದೆ. ಅನ್ನಭಾಗ್ಯದಿಂದ ಎಲ್ಲರಿಗೂ ಅಕ್ಕಿ ಸಿಗುತ್ತಿದೆ. ರಾಜ್ಯದ ಬರಗಾಲವನ್ನು ಸರ್ಕಾರ ಸಮರ್ಥವಾಗಿ ಎದುರಿಸುತ್ತಿದೆ. ಸದ್ಯಕ್ಕೆ ಸಾಲ ಮನ್ನಾ ಇಲ್ಲ ಎಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೇವಲ 22% ರಷ್ಟು ರೈತರು ರಾಜ್ಯ ಸರ್ಕಾರದ ಅಧೀನದ ಬ್ಯಾಂಕ್‍ಗಳಿಂದ ಸಾಲ ಪಡೆದಿದ್ದಾರೆ. ಇನ್ನು ಅನೇಕ ರೈತರು ಕೇಂದ್ರ ಸರ್ಕಾರ ಅಧೀನ ಬ್ಯಾಂಕ್‍ಗಳಿಂದ ಸಾಲ ಪಡೆದಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರದ ನೆರವು ಬೇಕಾಗುತ್ತದೆ. ಸರ್ವ ಪಕ್ಷ ಸಭೆಯಲ್ಲಿ ಯಾವೊಬ್ಬ ಬಿಜೆಪಿ ನಾಯಕರೂ ತುಟಿ ಬಿಚ್ಚಿ ಮಾತನಾಡಲಿಲ್ಲ. ಆದರೆ ರಾಜ್ಯದಲ್ಲಿ ಮಾತ್ರ ಯಡಿಯೂರಪ್ಪ ಬೇಕಾಬಿಟ್ಟಿ ಮಾತನಾಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.

ಬ್ಯಾಲೆಟ್ ಪೇಪರ್ ಸೂಕ್ತ: ಇವಿಎಂ ಮತಯಂತ್ರ ತಿರುಚುವ ಸಾಧ್ಯತೆಗಳಿವೆ. ಇವಿಎಂ ತಿರುಚುವಿಕೆಯಿಂದ ಮುಕ್ತವಾಗಿಲ್ಲ. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಇವಿಎಂ ಯಂತ್ರ ತಿರುಚುವ ಸಾಧ್ಯತೆಯಿದೆ. ಪ್ರಜಾಪ್ರಭುತ್ವ ದಲ್ಲಿ ನಂಬಿಕೆ ಇಲ್ಲದವರು ಈ ಕೆಲಸ ಮಾಡ್ತಾರೆ. ಚುನಾವಣೆಗೆ ಬ್ಯಾಲೆಟ್ ಪೇಪರ್ ಹೆಚ್ಚು ಸೂಕ್ತವೆಂದು ಸಿಎಂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದೇ ವೇಳೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದ ಸಿಎಂ, ಪ್ರತಾಪ್ ಸಿಂಹ ಅವರಿಗೆ ರಾಜಕೀಯ ಜ್ಞಾನವಿಲ್ಲ. ಅವರು ಅರೆ ಜ್ಞಾನ ಹೊಂದಿದ್ದಾರೆ. ಹೀಗಾಗಿ ಗೀತಾ ಮಹಾದೇವ ಪ್ರಸಾದ್ ಅವರ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದರು. ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತಿದ್ದು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಇದಕ್ಕೆ ಬೈ ಎಲೆಕ್ಷನ್ ಗೆದ್ದಿರೋದೆ ಸಾಕ್ಷಿ. ಮುಂದಿನ ಚುನಾವಣೆಗೆ ನಾವು ತಯಾರಾಗಿದ್ದೇವೆ. ಕಾರ್ಯಕರ್ತರು ಸೂಚಿಸುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು. ಉತ್ತರ ಭಾರತದ ತಂತ್ರಗಾರಿಕೆ ಕರ್ನಾಟಕದಲ್ಲಿ ನಡೆಯುವುದಿಲ್ಲ. ರಾಜ್ಯದಲ್ಲಿ ಮೋದಿ-ಅಮಿತ್ ಷಾ ಆಟ ನಡೆಯಲ್ಲ. ಬಿಜೆಪಿಯವರು ಎಂದೂ ಅಭಿವೃದ್ದಿ ವಿಷಯ ಚರ್ಚೆ ಮಾಡಲ್ಲ. ಜಾತಿ-ಧರ್ಮ ಒಡೆಯುವುದೇ ಬಿಜೆಪಿಯವರ ಕೆಲಸ ಅಂದ್ರು.

ಬಿಜೆಪಿ ಸಂಸದರ ವಿರುದ್ಧ ಆಕ್ರೋಶ: ಮಹದಾಯಿ, ಕಾವೇರಿ ಸೇರಿದಂತೆ ಅಂತರರಾಜ್ಯ ಜಲ ವಿವಾದಗಳನ್ನು ಪ್ರಧಾನಿ ಮಧ್ಯಸ್ಥಿಕೆ ವಹಿಸುವ ಮೂಲಕ ಬಗೆಹರಿಸಬಹುದು. ಹಿಂದೆ ದಿವಂಗತ ಇಂದಿರಾಗಾಂಧಿ ಅವರು ಈ ಕೆಲಸ ಮಾಡಿದ್ರು. ಆದ್ರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆ ಮನಸ್ಸಿಲ್ಲ. ನಮ್ಮ ಸಂಸದರಿಗೂ ಆ ಬಗ್ಗೆ ಮನಸ್ಸಿಲ್ಲ. ಸರ್ವ ಪಕ್ಷ ಸದಸ್ಯರ ಸಭೆಯಲ್ಲಿ ಬಾಯಿ ಮುಚ್ಚಿಕೊಂಡು ಕೂತಿರುತ್ತಾರೆ ಅಂತಾ ಸಿಎಂ ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎರಡು ದಿನದ ಪ್ರವಾಸದಲ್ಲಿ ಹೈಕಮಾಂಡ್‍ನಿಂದ ಶಬ್ಬಾಸ್ ಗಿರಿ ಪಡೆದಿರುವ ಸಿಎಂ ಹಲವು ವಿಚಾರಗಳ ಕುರಿತು ಮಾತಕತೆ ನಡೆಸಿದ್ದು ಸದ್ಯದಲ್ಲೆ ವಿಧಾನ ಪರಿಷತ್‍ನ ಮೂರು ಸದ್ಯಸರು ಹಾಗೂ ಕೆಪಿಸಿಸಿ ನೂತನ ಅಧ್ಯಕ್ಷರ ಹೆಸರು ಘೋಷನೆ ಮಾಡಲಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *