ವಿಶೇಷವಾಗಿ ರೈತ ದಿನಾಚರಣೆ ಆಚರಿಸಿದ ಅನ್ನದಾತರು

Public TV
1 Min Read

ಚಿಕ್ಕೋಡಿ: ಕಾಯಕವೇ ಕೈಲಾಸ ಎಂಬಂತೆ ಕಬ್ಬು ನಾಟಿ ಮಾಡಿ, ಎತ್ತುಗಳೊಂದಿಗೆ ಹೊಲದಲ್ಲಿಯೇ ರೈತರ ದಿನಾಚಾರಣೆಯನ್ನು ಆಚರಿಸುವ ಮೂಲಕ ರೈತರು ಇತರರಿಗೆ ಮಾದರಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಉನ್ನತಿ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಕಬ್ಬು ನಾಟಿ ಮಾಡುವ ಮೂಲಕ ವಿಶಿಷ್ಟವಾಗಿ ರೈತ ದಿನ ಆಚರಿಸಲಾಯಿತು.

ದಿನಾಚಣೆಯ ಅಂಗವಾಗಿ ಪಾಶ್ಚಾಪೂರೆ ಅವರ ತೋಟದಲ್ಲಿ ಎತ್ತುಗಳಿಗೆ ವಿಶೇಷ ಪೂಜೆ ಮಾಡಿ, ನಂತರ ಕಬ್ಬು ನಾಟಿ ಮಾಡಲಾಯಿತು. ಪ್ರತ್ಯೇಕ ವೇದಿಕೆ ನಿರ್ಮಿಸದೆ ನೆಲದ ಮೇಲೆಯೇ ಕುಳಿತು ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರೈತ ಸಾಧಕರಾದ ಕಾಶೀನಾಥ ಪಾಶ್ಚಾಪೂರೆ, ಅಪ್ಪಾಸಾಬ ತಬಕೆರೆ, ರಾಜೇಂದ್ರ ಪಾಶ್ವಾಪೂರೆ, ಸಿದ್ಧಲಿಂಗ ಪಾಶ್ಚಾಪೂರೆ ಅವರಿಗೆ ಶಾಲು ಹೊದಿಸಿ, ಮೆಕ್ಕೆ ಜೋಳದ ತೆನೆ ನೀಡಿ ಸನ್ಮಾನಿಸಲಾಯಿತು. ಅಲ್ಲದೆ ರೈತರೆಲ್ಲರೂ ನೆಲದ ಮೇಲೆಯೇ ಕುಳಿತು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ರೈತ ದಿನಾಚರಣೆ ಎಂದು ಕೈ ಕಟ್ಟಿ ಕೂರದೆ, ದಿನಾಚರಣೆ ನೆಪದಲ್ಲಿ ಸಮಯ, ದಿನ ವ್ಯರ್ಥ ಮಾಡದೆ, ಕಾರ್ಯಕ್ರಮದ ನಂತರ ಉಳಿಮೆ ಮಾಡುವ ಕೆಲಸದಲ್ಲಿ ತೊಡಗಿದರು. ದೈನಂದಿನ ಕೆಲಸ ಮಾಡುತ್ತಲೇ ಆಚರಣೆ ಮಾಡುವ ಮೂಲಕ ಇತರರಿಗೆ ಮಾದರಿಯಾದರು.

Share This Article
Leave a Comment

Leave a Reply

Your email address will not be published. Required fields are marked *