ರೇಷ್ಮೆಗೆ ಬೆಂಬಲ ಬೆಲೆ ಬಗ್ಗೆ ಎಚ್‍ಡಿಕೆ ಚರ್ಚೆಯ ಬೆನ್ನಲ್ಲೇ ರೈತ ಆತ್ಮಹತ್ಯೆ!

Public TV
1 Min Read

ರಾಮನಗರ: ರೇಷ್ಮೆ ಬೆಳೆ ಬೆಲೆ ಕುಸಿತ ಹಿನ್ನೆಲೆಯಲ್ಲಿ ರೈತನೋರ್ವ ಕ್ರಿಮಿನಾಶಕ ಸೇವಿಸಿ, ನೇಣುಬಿಗಿದುಕೊಂಡು ಸಾವನ್ನಪ್ಪಿದ ಘಟನೆ ರಾಮನಗರ ತಾಲೂಕಿನ ಕಟಮಾನದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಕಟುಮಾನದೊಡ್ಡಿಯ ನಿವಾಸಿ ರೇಷ್ಮೆ ಬೆಳೆಗಾರ ಕೆಂಪಯ್ಯ ಮೃತ ದುರ್ದೈವಿ. ವಿವಿಧ ಬ್ಯಾಂಕ್ ಗಳಲ್ಲಿ 5 ಲಕ್ಷ ಸಾಲ ಮಾಡಿಕೊಂಡಿದ್ದ ಕೆಂಪಯ್ಯ ರೇಷ್ಮೆ ಬೆಳೆ ಬೆಳೆಯುತ್ತಿದ್ದರು. ಸೋಮವಾರ ರೇಷ್ಮೆ ಬೆಳೆಯ ಬೆಂಬಲ ಬೆಲೆಯ ಬಗ್ಗೆ ರಾಮನಗರದಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸಭೆ ನಡೆಸಿ ಚರ್ಚೆ ನಡೆಸಲಾಗಿತ್ತು. ಇಂದು ಮತ್ತೆ ಬೆಂಗಳೂರಿನಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳು ಹಾಗೂ ರೈತರ ಜೊತೆ ಚರ್ಚೆ ನಡೆಸಲು ಮುಂದಾಗಿರುವ ಬೆನ್ನಲ್ಲೇ ರೈತ ಸಾವನ್ನಪ್ಪಿದ್ದಾರೆ.

ಮೃತ ರೈತ ಕೆಂಪಯ್ಯ ನಿನ್ನೆ ತನ್ನ ಪತ್ನಿಯ ಬಳಿ ರೇಷ್ಮೆಗೂಡಿನ ಬೆಲೆ ಹೆಚ್ಚಳವಾಗುತ್ತೆ ಎಂದು ಹೇಳಿದ್ದರು. ಆದ್ರೆ ಬೆಲೆ ಹೆಚ್ಚಳ, ಬೆಂಬಲ ಬೆಲೆ ಯಾವುದು ಆಗಿರಲಿಲ್ಲ. 125 ಮೊಟ್ಟೆಯ ರೇಷ್ಮೆ ಬೆಳೆ ಬೆಳೆದಿರುವ ಮೃತ ಕೆಂಪಯ್ಯ ಇಂದು ರೇಷ್ಮೆಹುಳುಗಳನ್ನು ಚಂದ್ರಿಕೆಗೆ ಬಿಟ್ಟು ಗೂಡು ಮಾಡಿ ಮಾರಾಟಕ್ಕೆ ಮುಂದಾಗಬೇಕಿತ್ತು. ಆದ್ರೆ ರೇಷ್ಮೆ ಬೆಳೆಗೆ ಬೆಲೆ ನಿಗದಿ, ಬೆಂಬಲ ಬೆಲೆ ಘೋಷಣೆಯಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *