ಬದುಕಿದ್ದೇನೆಂದು ತಿಳಿಸಲು 3 ವರ್ಷಗಳಿಂದ ಹೋರಾಡುತ್ತಿದ್ದಾನೆ ರೈತ!

Public TV
1 Min Read

ಮಂಡ್ಯ: ತಾನು ಬದುಕಿದ್ದೇನೆ ಎನ್ನುವುದನ್ನು ಸಾಬೀತು ಪಡಿಸಲು ರೈತರೊಬ್ಬರು ಕಳೆದ ಮೂರು ವರ್ಷಗಳಿಂದ ಹರಸಾಹಸ ಪಡುತ್ತಿರುವ ಶೋಚನಿಯ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಹಾರೋಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಹಾರೋಹಳ್ಳಿ ಗ್ರಾಮದ ರಾಮೇಗೌಡ ದಾಖಲೆಗಳಲ್ಲಿ ಮೃತಪಟ್ಟು ನಿಜ ಜೀವನದಲ್ಲಿ ಬದುಕಿರುವ ರೈತನಾಗಿದ್ದಾರೆ. ಸರ್ಕಾರಿ ಅಧಿಕಾರಿಯ ಬೇಜವಾಬ್ದಾರಿತನದಿಂದ ಬದುಕಿರುವಾಗಲೇ ರೈತನಿಗೆ ಮರಣ ಪತ್ರ ನೀಡಿ, ರೈತನ ಬದುಕಿಗೆ  ಕೊಳ್ಳಿ ಇಟ್ಟಿದ್ದಾರೆ. ಹೀಗಾಗಿ ರಾಮೇಗೌಡರವರು ನಿಜವಾಗಿಯೂ ಸತ್ತೇ ಹೋಗಿದ್ದಾರೆ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಿಸಿ, ಮತದಾರರ ಪಟ್ಟಿಯಿಂದಲೂ ಹೆಸರನ್ನು ತೆಗೆದುಹಾಕಿದ್ದಾರೆ. ಇದರಿಂದಾಗಿ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಮತ್ತು ಅಧಿಕೃತವಾಗಿ ವ್ಯವಹಾರ ನಡೆಸಲು ಸಾಧ್ಯವಾಗದೇ ರೈತ ಕಂಗಾಲಾಗಿ ಹೋಗಿದ್ದಾರೆ.

ತನಗಾಗುತ್ತಿರುವ ಕಷ್ಟವನ್ನು ಪರಿಹರಿಸಿಕೊಡಿ ಎಂದು ಸತತ ಮೂರು ವರ್ಷಗಳಿಂದಲೂ ರಾಮೇಗೌಡ ಹೋರಾಟ ನಡೆಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ನೀನು ಈಗಾಗಲೇ ಸತ್ತು ಹೋಗಿದ್ದೀಯ, ಇನ್ನೇನು ಸರಿಪಡಿಸೋದು ಎಂದು ಅಪಹಾಸ್ಯ ಮಾಡುತ್ತಿದ್ದಾರೆ. ಅಧಿಕಾರಿಗಳ ಹೇಳಿಕೆಯಿಂದ ತೀವ್ರವಾಗಿ ಮನನೊಂದ ಅವರು ದಾಖಲೆಗಳಲ್ಲಿ ಮಾತ್ರ ಸತ್ತಿರುವ ನಾನು ನಿಜವಾಗಿಯೂ ಸತ್ತೇ ಹೋಗುತ್ತೇನೆ ಎಂದು ಆತ್ಮಹತ್ಯೆಗೂ ಪ್ರಯತ್ನಿಸಿದ್ದರು.

ಆತ್ಮಹತ್ಯೆಗೆ ಯತ್ನಸಿದ ರಾಮೇಗೌಡರವರನ್ನು ಕುಟುಂಬಸ್ಥರು ಕಾಪಾಡಿಕೊಳ್ಳುವಲ್ಲಿ ಸಫಲರಾಗಿದರು. ಆದರೆ ಇನ್ನಾದರೂ ಸರ್ಕಾರಿ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಮಾತನಾಡದೇ, ಆಗಿರುವ ತಪ್ಪನ್ನು ಸರಿಪಡಿಸಕೊಡಬೇಕೆಂದು ಕುಟುಂಬಸ್ಥರು ಮನವಿಮಾಡಿಕೊಂಡಿದ್ದಾರೆ.

ಏನದು ಘಟನೆ?
2015ರಲ್ಲಿ ರಾಮೇಗೌಡರ ತಂದೆ ತಿಮ್ಮೇಗೌಡರು ಮೃತಪಟ್ಟ ಹಿನ್ನೆಲೆಯಲ್ಲಿ ಅರಕೆರೆ ಗ್ರಾಮದ ನಾಡಕಚೇರಿಯಲ್ಲಿ ಅವರು ಮರಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ವಿಲೇಜ್ ಅಕೌಂಟೆಂಟ್ ಲಿಂಗಪ್ಪಾಜಿ ಎಂಬವರ ಬೇಜವಾಬ್ದಾರಿತನದಿಂದಾಗಿ ಇಬ್ಬರ ಹೆಸರಲ್ಲೂ ಮರಣಪತ್ರ ನೋಂದಣಿಯಾಗಿದೆ. ಖುದ್ದು ತಲಶೀಲ್ದಾರರೇ ಸಹಿ ಹಾಕಿದ ಮರಣಪತ್ರಗಳನ್ನು ನಾಡಕಚೇರಿಯಿಂದ ರೈತ ಪಡೆದುಕೊಂಡು, ಆಘಾತಕ್ಕೆ ಒಳಗಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *