ಹಳೆ ಹುಡ್ಗಿ ವಾಪಸ್ ಬರ್ಲಿ ಅಂತ ಕೇಳಿಲ್ಲ – ಆದ್ರೆ ಆರ್‌ಸಿಬಿ ಕಪ್ ಗೆಲ್ಲೋ ತರ ಮಾಡಮ್ಮ

Public TV
1 Min Read

– ಮೈಸೂರಿನ ಚಾಮುಂಡಿ ಸನ್ನಿಧಾನದ ಆವರಣದಲ್ಲಿ ಅಭಿಮಾನಿಗಳಿಂದ ಪೂಜೆ

ಬೆಂಗಳೂರು: ಕ್ರಿಕೆಟ್ ಹಬ್ಬವೆಂದೇ ಕರೆಸಿಕೊಳ್ಳುವ ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ ತಂಡ ಚಾಂಪಿಯನ್ ಆಗಲಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಮೈಸೂರಿನ ಚಾಮುಂಡಿ ಸನ್ನಿಧಾನದಲ್ಲಿ ಆರ್‌ಸಿಬಿ ಬ್ಯಾನರ್ ಹಿಡಿದು ಯುವಕರು ಪೂಜೆ ಮಾಡಿದ್ದಾರೆ. ಇಬ್ಬರು ಯುವಕರು ಬ್ಯಾನರ್ ಹಿಡಿದುಕೊಂಡಿದ್ದರೆ, ಮತ್ತೊಬ್ಬ ಯುವಕ ಬ್ಯಾನರಿಗೆ ಪೂಜೆ ಮಾಡಿದ್ದಾನೆ. ಇದನ್ನೂ ಓದಿ:  ಹೊಸ ದಶಕ, ಹೊಸ ಆರ್‌ಸಿಬಿ- ಹೇಗಿದ್ದ ಲೋಗೋ ಹೇಗೆ ಬದಲಾಯಿತು?

ವಿಡಿಯೋದಲ್ಲಿ, ನೋಡು ತಾಯಿ. ನಾನು ಕೆಲಸ ಕೊಡು ಎಂದು ಕೇಳಲಿಲ್ಲ, ಹಳೆ ಹುಡುಗಿ ವಾಪಸ್ ಬರಲಿ ಎಂದು ನಾನು ಕೇಳುತ್ತಿಲ್ಲ. ನಮ್ಮ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲೋ ತರ ಮಾಡು ತಾಯಿ. ನಾಯಿ ಕಣ್ಣು, ನರಿ ಕಣ್ಣು ಎಲ್ಲರ ಕಣ್ಣು, ದುಷ್ಮನ್ ಕಣ್ಣುಗಳೆಲ್ಲಾ ಹೋಗಲಿ ಎಂದು ದೃಷ್ಟಿ ತೆಗೆಯುತ್ತೇನೆ. ಮಾಡಿಲ್ಲ ತಪ್ಪು ಈ ಸಲ ಬರಬೇಕು ನಮಗೆ ಕಪ್ಪು. ತಾಯಿ ಈ ಸಲ ಕಪ್ ಗೆಲ್ಲುವ ರೀತಿ ಮಾಡು ಎಂದು ದೇಗುಲದ ಆವರಣದಲ್ಲಿ ಆರ್‌ಸಿಬಿ ಅಭಿಮಾನಿಗಳು ಈಡುಗಾಯಿ ಒಡೆದಿದ್ದಾರೆ. ಇದನ್ನೂ ಓದಿ: ನಮ್ಮ ಬೆಂಗಳೂರು ಕುಟುಂಬ ರೆಡಿನಾ- ಕನ್ನಡದಲ್ಲೇ ಚಹಲ್ ಟ್ವೀಟ್

ಕಳೆದ ತಿಂಗಳು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ರಥೋತ್ಸವ ಜರುಗಿತ್ತು. ಈ ವೇಳೆ ಆರ್‌ಸಿಬಿ ಅಭಿಮಾನಿ ಹನೂರಿನ ರಘು ಅವರು ಬಾಳೆ ಹಣ್ಣಿನ ಮೇಲೆ `ಈ ಸಲ ಕಪ್ ನಮ್ದೆ’ ಎಂದು ಬರೆದು ಮಾದಪ್ಪನ ರಥಕ್ಕೆ ಎಸೆದು ಬೇಡಿಕೊಂಡಿದ್ದರು. ರಘು ಬಾಳೆಹಣ್ಣು ಎಸೆದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಸದ್ಯ ಆರ್‌ಸಿಬಿ ತಂಡ ಐಪಿಎಲ್‍ನಲ್ಲಿ ಕಪ್ ಗೆಲ್ಲಬೇಕು ಎಂದು ಅಭಿಮಾನಿಗಳು ಪೂಜೆ, ಹರಕೆ ಕಟ್ಟುವ ಮೂಲಕ ದೇವರ ಮೊರೆ ಹೋಗುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *