ಕುರಿ ಕಡಿದು ಸುದೀಪ್ ಪೋಸ್ಟರ್‌ಗೆ ಅಭಿಮಾನಿಗಳಿಂದ ರಕ್ತಾಭಿಷೇಕ

Public TV
1 Min Read

ದಾವಣಗೆರೆ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಟನೆಯ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರ ಬಿಡುಗಡೆ ಆಗಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಕುರಿ ಕಡಿದು ಸುದೀಪ್ ಅವರ ಪೋಸ್ಟರ್‌ಗೆ ರಕ್ತಾಭಿಷೇಕ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದಾರೆ.

ಜಿಲ್ಲೆಯ ಜಗಳೂರು – ಚಳ್ಳಕೆರೆ ತಾಲೂಕುಗಳ ನಡುವೆ ಇರುವ ಮಲೇ ಬೋರನಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಭಿಮಾನಿಗಳು ಸುದೀಪ್ ಅವರ ಪೋಸ್ಟರ್‌ಗೆ ಕುರಿ ಕಡಿದು ರಕ್ತಾಭಿಷೇಕ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಕಟೌಟಿಗೆ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ

ಈ ಹಿಂದೆ ಸುದೀಪ್ ಹಾಗೂ ಶಿವರಾಜ್‍ಕುಮಾರ್ ಅವರು ನಟಿಸಿದ ‘ದಿ-ವಿಲನ್’ ಚಿತ್ರದ ಬಿಡುಗಡೆ ಆಗಿದ್ದಾಗ ಅಭಿಮಾನಿಗಳು ಪ್ರಾಣಿಗಳನ್ನು ಬಲಿ ಕೊಟ್ಟಿದ್ದರು. ಅಲ್ಲದೆ ಸುದೀಪ್ ಅವರ ಕಟೌಟ್ ಹಾಗೂ ಪೋಸ್ಟರ್‌ಗೆ ರಕ್ತದ ಅಭಿಷೇಕ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ:  ಅಭಿಮಾನಿಗಳ ಪೈಶಾಚಿಕ ಕೃತ್ಯಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

ಅಭಿಮಾನಿಗಳು ನಡೆಸಿದ್ದ ಈ ಕೃತ್ಯಕ್ಕೆ ಕಿಚ್ಚ ಸುದೀಪ್ ಟ್ವಿಟ್ಟರಿನಲ್ಲಿ, “ಈ ರೀತಿಯ ಕೃತ್ಯಗಳನ್ನು ನಡೆಸುತ್ತಿರುವುದು ನಿಜಕ್ಕೂ ಅಮಾನವೀಯ. ನಾನು ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತೇನೆ ದಯವಿಟ್ಟು ಇದನ್ನು ನಿಲ್ಲಿಸಿ. ವಿಲನ್ ಚಿತ್ರತಂಡ ನಿಮ್ಮ ಈ ರೀತಿಯ ಪ್ರೀತಿ ಹಾಗೂ ಗೌರವ ನೋಡಲು ಇಷ್ಟಪಡುವುದಿಲ್ಲ. ದಯವಿಟ್ಟು ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಲ್ಲಿಸಿ” ಎಂದು ಟ್ವೀಟ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಸುದೀಪ್ ಅಂದೇ ಮನವಿ ಮಾಡಿಕೊಂಡಿದ್ದರೂ ಈ ಚಿತ್ರದ ಬಿಡುಗಡೆಯ ಸಂದರ್ಭದಲ್ಲೂ ಕುರಿ ಕಡಿದಿದ್ದಾರೆ.

ದಾವಣಗೆರೆಯ ಗೀತಾಂಜಲಿ, ವಸಂತ ಚಿತ್ರಮಂದಿರದಲ್ಲಿ ಪೈಲ್ವಾನ್ ಚಿತ್ರ ಪ್ರದರ್ಶನ ಆಗುತ್ತಿದೆ. ಸುದೀಪ್ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಬೃಹತ್ ಕಟೌಟ್‍ಗೆ ಹಾರ ಹಾಕಿ ಸಂಭ್ರಮಿಸಿದ್ದಾರೆ. ಅಲ್ಲದೆ ಸುದೀಪ್ ಅಭಿಮಾನಿ ಸಂಘ ದಾವಣಗೆರೆಯ ಪ್ರಮುಖ ಪೈಲ್ವಾನ್‍ಗಳನ್ನು ಚಿತ್ರಮಂದಿರಕ್ಕೆ ಕರೆಸಿ ಸನ್ಮಾನ ಮಾಡುವ ಮೂಲಕ ವಿಭಿನ್ನವಾಗಿ ಸಂಭ್ರಮಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *