ರಾಮನಗರ: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಚಿಕ್ಕೇನಹಳ್ಳಿ ಕೆರೆಯಲ್ಲಿ ನಡೆದಿದೆ.
ಶೇಖರ್ (39), ಸುಮಾ(28), ಹಂಸಾ (7) ಮತ್ತು ಧನು (8) ಮೃತ ದುರ್ದೈವಿಗಳು. ಮೂಲತಃ ಚನ್ನಪಟ್ಟಣದ ಹನುಮಂತ ನಗರದ ನಿವಾಸಿಗಳಾದ ಶೇಖರ್ ಮತ್ತು ಸುಮಾ ಇಬ್ಬರು ಮೂರು ತಿಂಗಳ ಹಿಂದೆ ಮದುವೆ ಆಗಿದ್ದರು. ಮದುವೆಯಾದ ಹೊಸತರಲ್ಲಿ ಸುಮಾ ತನ್ನ ಚಿಕ್ಕೇನಹಳ್ಳಿಯ ಅಕ್ಕ ಶಕುಂತಲಾರ ಮನೆಗೆ ಬಂದಿದ್ದರು.
ಶಕುಂತಲಾರ ಮಕ್ಕಳಾದ ಹಂಸಾ ಮತ್ತು ಧನು ಈಜಲು ಕೆರೆಗೆ ಇಳಿದಿದ್ದರು. ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ನೋಡಿದ ಶೇಖರ್ ಕಾಪಾಡಲು ಮುಂದಾಗಿದ್ದಾರೆ. ಪತಿಯ ಹಿಂದೆಯೇ ಸುಮಾ ಕೂಡ ಕೆರೆಗೆ ಇಳಿದಿದ್ದಾರೆ. ಕೆರೆಯ ಆಳ ಹೆಚ್ಚಿದ್ದರಿಂದ ಹಂಸಾಳ ಹೊರತು ಪಡಿಸಿ ಮೂವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಹಂಸಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಮೃತ ದೇಹಗಳನ್ನು ಕೆರೆಯಿಂದ ಹೊರ ತೆಗೆಯಲಾಗಿದೆ.