ಮೈಸೂರು: ಜಿಲ್ಲೆಯ ಕೆ.ಆರ್.ನಗರದ ಚುಂಚನಕಟ್ಟೆ ಜಲಪಾತವು ಶನಿವಾರ ರಾತ್ರಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಬೆಳಕಿನಿಂದ ಕಂಗೊಳಿಸಿತು.
ಜಲಪಾತೋತ್ಸವದ ನಿಮಿತ್ತ ಶೃಂಗಾರಗೊಂಡ ಚುಂಚನಕಟ್ಟೆ ಜಲಪಾತ ಪ್ರಿಯರಿಗೆ ಕಣ್ಣುಗಳಿಗೆ ಮುದ ನೀಡಿತು. ಕೆಂಪು, ನೀಲಿ, ಹಳದಿ, ನೇರಳೆ ಬಣ್ಣದ ಲೇಸರ್ ಬೆಳಕನ್ನು ಜಲಪಾತದ ಮೇಲೆ ಬಿಟ್ಟು, ಪ್ರವಾಸಿಗಳನ್ನು ರಂಜಿಸಲಾಯಿತು. ಜೊತೆಗೆ ಜಲಪಾತೋತ್ಸವ ವೀಕ್ಷಣೆಗೆ ಬಂದಿದ್ದ ಸಾರ್ವಜನಿಕರಿಗಾಗಿ ವಿವಿಧ ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಎಲ್ಲಿದೆ ಚುಂಚನಕಟ್ಟೆ ಜಲಪಾತ:
ಕಾವೇರಿ ನದಿಯು ಕೃಷ್ಣರಾಜನಗರ ತಾಲೂಕಿನಲ್ಲಿ ಚುಂಚನಕಟ್ಟೆಯಲ್ಲಿ ಸುಮಾರು 65 ಅಡಿಗಳ ಎತ್ತರದಿಂದ ಧುಮ್ಮಿಕ್ಕಿ ಮೋಹಕ ಜಲಪಾತವನ್ನು ಸೃಷ್ಟಿಸಿದೆ. ಚುಂಚನಕಟ್ಟೆ ಜಲಪಾತವು ಕೃಷ್ಣರಾಜನಗರದಿಂದ 15 ಕಿ.ಮೀ ದೂರದಲ್ಲಿದ್ದು, ಇಲ್ಲಿರುವ ಕೋದಂಡರಾಮ ದೇವಾಲಯವು ಪ್ರಸಿದ್ಧವಾಗಿದೆ. ಶ್ರೀರಾಮನು ವನವಾಸಕಾಲದಲ್ಲಿ ಪತ್ನಿ ಸೀತಾದೇವಿ ಜೊತೆಗೆ ಚುಂಚನಕಟ್ಟೆ ಜಲಪಾತಕ್ಕೆ ಬಂದಿದ್ದನೆಂದು ಪುರಾಣದಲ್ಲಿ ಉಲ್ಲೇಖವಿದೆ. ಇಲ್ಲಿನ ದೇವಸ್ಥಾನದ ವಿಶೇಷವೆಂದರೆ ಶ್ರೀರಾಮನ ಬಲಬದಿಗೆ ಸೀತಾದೇವಿಯ ವಿಗ್ರಹವಿದೆ.