ನಕಲಿ ಐಟಿ ಅಧಿಕಾರಿಗಳ ವೇಷದಲ್ಲಿ ವಂಚನೆ- ಸಂತ್ರಸ್ತನ ಮನೆಯಲ್ಲಿ ಹಣ ಪೀಕಲು ನಡೆಸಿದ್ರು ಮಸಲತ್ತು

Public TV
1 Min Read

ಬಾಗಲಕೋಟೆ: ಪ್ರವಾಹ ಸಂತ್ರಸ್ತನ ಮನೆ ಮೇಲೆ ನಕಲಿ ಐಟಿ ದಾಳಿ ನಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲಕ್ಷ್ಮಣ ಸರೆನ್ನವರ್ (ಅಲಗೂರು) ಎಂಬವರು ನಕಲಿ ಐಟಿ ಅಧಿಕಾರಿಗಳ ವಂಚನೆಗೆ ಒಳಗಾದವರು. ಡಿಸೆಂಬರ್ 23ರಂದು ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಲಕ್ಷ್ಮಣ್ ಅವರ ಮನೆಗೆ ಡಿಸೆಂಬರ್ 23ರಂದು ಬೆಳಗ್ಗೆ ನಾಲ್ಕು ಗಂಟೆಗೆ ಗೋವಾ ಪಾಸಿಂಗ್ ಇರುವ ಎರ್ಟಿಗಾ ಕಾರಿನಲ್ಲಿ ಓರ್ವ ಮಹಿಳೆ ಸೇರಿದಂತೆ ಏಳು ಜನ ಬಂದಿದ್ದರು.

ಲಕ್ಷ್ಮಣ್ ಮನೆಯವರಿಗೆ ತಾವು ಐಟಿ ಅಧಿಕಾರಿಗಳೆಂದು ಹೇಳಿ, ಮನೆಯ ಹಾಲ್ ನಲ್ಲಿನ ಹಾಸುಕಲ್ಲು, ಬ್ಯಾಗ್, ಪೆಟ್ಟಿಗೆ ಕಿತ್ತು ಜಾಲಾಡಿದ್ದಾರೆ. ಸೀಜ್ ಮಾಡುವ ನೆಪದಲ್ಲಿ 12,500 ರೂ. ಮೂರು ಮೊಬೈಲ್ ಹೊತ್ತೊಯ್ದಿದ್ದಾರೆ.

ಇತ್ತೀಚೆಗೆ ಪ್ರವಾಹದ ವೇಳೆ ಲಕ್ಷ್ಮಣ್ ಮನೆಗೆ ಕೋಟಿ ಕೋಟಿ ಹಣ ಬಂದಿದೆ ಎಂದು ಸುದ್ದಿ ಹಬ್ಬಿತ್ತು. ಈ ಸುದ್ದಿ ತಿಳಿದು ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ವಂಚನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ವಂಚಕರು ಬೆಳಗಾವಿಗೆ ಬಂದು ಭೇಟಿಯಾಗಿ ಎಂದು ಬೆಳಗಾವಿ ತೆರಿಗೆ ಇಲಾಖೆ ವಿಳಾಸ ಕೊಟ್ಟು ಹೋಗಿದರು. ವಂಚಕರ ಮಾತು ಕೇಳಿ ಲಕ್ಷ್ಮಣ ಅಲಗೂರ ಬೆಳಗಾವಿಗೆ ಹೋದಾಗ ಮೋಸ ಹೋಗಿದ್ದಾಗಿ ತಿಳಿದುಬಂದಿದೆ.

ಈ ನಕಲಿ ಐಟಿ ದಾಳಿ ಹಿಂದೆ ಗ್ರಾಮಸ್ಥರ ಕೈವಾಡದ ಶಂಕೆ ವ್ಯಕ್ತವಾಗಿದ್ದು, ಸದ್ಯ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *