ಆಪ್‍ಗಿಂತ ಐದು ಪಟ್ಟು ಹೆಚ್ಚು ಸಬ್ಸಿಡಿ- ಬಿಜೆಪಿಗೆ ಕೇಜ್ರಿವಾಲ್ ತಿರುಗೇಟು

Public TV
1 Min Read

ನವದೆಹಲಿ: ಆಪ್ ಭದ್ರಕೋಟೆ ಎನಿಸಿಕೊಂಡಿರುವ ದೆಹಲಿಯನ್ನು ವಶಪಡಿಸಿಕೊಳ್ಳಲು ಬಿಜೆಪಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಆಮ್ ಆದ್ಮಿ ಸರ್ಕಾರಕ್ಕಿಂತ ಐದು ಪಟ್ಟು ಹೆಚ್ಚು ಸಬ್ಸಿಡಿ ನೀಡುವ ಭರವಸೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಶೀಘ್ರದಲ್ಲೇ ಬಿಜೆಪಿ ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಪ್ರಾಣಾಳಿಕೆ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಐದು ಪಟ್ಟು ಸಬ್ಸಿಡಿ ಹೆಚ್ಚಿಸುವ ಬಗ್ಗೆ ಪ್ರಣಾಳಿಕೆ ತಯಾರಿಕೆ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ.

ಪ್ರಣಾಳಿಕೆ ತಯಾರಿಕೆ ನೇತೃತ್ವದ ಹೊತ್ತಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ನಾವು ಆಮ್ ಅದ್ಮಿ ಸರ್ಕಾರ ನೀಡಿರುವ ಸಬ್ಸಿಡಿಗಳನ್ನು ರದ್ದು ಪಡಿಸುವ ಯೋಚನೆ ಇಲ್ಲ. ಬದಲಿಗೆ ಸಬ್ಸಿಡಿಯನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿದೆ ಎಂದಿದ್ದಾರೆ. 1731 ಅಕ್ರಮ ಕಾಲೋನಿಗಳನ್ನು ಕೇಂದ್ರ ಸರ್ಕಾರ ಸಕ್ರಮ ಮಾಡಿದ್ದು, ಸಿಎಎ ಮೂಲಕ ದೆಹಲಿಯ ಅಕ್ರಮ ನಿವಾಸಿಗರಿಗೆ ಪೌರತ್ವ ನೀಡಿದ್ದೇವೆ ಮತ್ತು ಅಕ್ರಮ ಕಾಲೋನಿಗಳನ್ನು ಸಕ್ರಮ ಮಾಡಿರುವುದು ಪ್ರಣಾಳಿಕೆಯಲ್ಲಿ ಸಮರ್ಥಿಸಿಕೊಳ್ಳಲಿದ್ದೇವೆ ಎಂದಿದ್ದಾರೆ.

ದೆಹಲಿಯಲ್ಲಿ ಈಗಾಗಲೇ ಎಎಪಿ ಕುಡಿಯುವ ನೀರು, ವಿದ್ಯುತ್‍ಗೆ ಸಬ್ಸಿಡಿ ನೀಡಿದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಇದನ್ನು ಮುಂದುವರಿಸುವ ಜೊತೆಗೆ ಈ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಬಿಜೆಪಿ ಚಿಂತಿಸಿದೆ ಎನ್ನಲಾಗುತ್ತಿದೆ.

ಇದಕ್ಕೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ‘ನಮ್ಮಕ್ಕಿಂತ ಐದು ಪಟ್ಟೇ’ ಎಂದು ವ್ಯಂಗ್ಯ ಮಾಡಿದ್ದಾರೆ. ಅಲ್ಲದೇ 200 ಯೂನಿಟ್‍ಗೆ ಹೆಚ್ಚು ಪಟ್ಟು ಎಂದರೆ 1000 ಯೂನಿಟ್? 20 ಸಾವಿರ ಲೀಟರ್ ಉಚಿತ ನೀರಿಗೆ ಐದು ಪಟ್ಟು ಎಂದರೆ ಒಂದು ಲಕ್ಷ ಲೀಟರ್ ನೀರು ಉಚಿತವಾಗಿ ನೀಡಲಾಗುವುದೇ ಎಂದಿದ್ದಾರೆ.

ಬಿಜೆಪಿ ಈ ಹೇಳಿಕೆ ದೆಹಲಿಯ ಜನರನ್ನು ಗೇಲಿ ಮಾಡಿದಂತಿದೆ ಎಂದು ಟೀಕಿಸಿದ್ದಾರೆ. ಅಲ್ಲದೇ ದೆಹಲಿಗೂ ಮುನ್ನ ಬಿಜೆಪಿ ಆಡಳಿತ ರಾಜ್ಯದಲ್ಲಿ ಮೊದಲು ಸಬ್ಸಿಡಿ ಆರಂಭಿಸಿ ಎಂದು ಸವಾಲು ಹಾಕಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *