Explainer| ಭಾರತದಲ್ಲಿ ಮತ್ತೆ F1 ರೇಸ್‌? 3 ವರ್ಷ ನಡೆದ ಬಳಿಕ ಸ್ಥಗಿತಗೊಂಡಿದ್ದು ಯಾಕೆ?

5 Min Read

ಭಾರತದಲ್ಲಿ (India) ಮತ್ತೆ ಫಾರ್ಮುಲಾ 1 ರೇಸ್‌ (Formula 1 Race) ಆರಂಭವಾಗುವ ಸಾಧ್ಯತೆಯಿದೆ. ಅದಾನಿ ಬಂದರು ಮತ್ತು ಎಸ್‌ಇಝಡ್‌ ನಿರ್ದೇಶಕ ಕರಣ್‌ ಅದಾನಿ (Karan Adani) ಅವರು ಭಾರತದಲ್ಲಿ ಫಾರ್ಮುಲಾ 1 ರೇಸ್‌ ಮತ್ತೆ ಆರಂಭಿಸುವ ಬಗ್ಗೆ ಮಾತನಾಡಿದ್ದರಿಂದ ಮತ್ತೆ ಚರ್ಚೆ ಆರಂಭವಾಗಿದೆ. ಹೀಗಾಗಿ ಇಲ್ಲಿ ಭಾರತದಲ್ಲಿ ನಡೆಯುತ್ತಿದ್ದ ಫಾರ್ಮುಲಾ 1 ರೇಸ್‌ ಸ್ಥಗಿತಗೊಂಡಿದ್ದು ಯಾಕೆ? ಭಾರತದಲ್ಲಿ ರೇಸ್‌ ಆರಂಭಿಸಲು ಇರುವ ಸವಾಲುಗಳೇನು ಇತ್ಯಾದಿ ವಿಚಾರಗಳನ್ನು ತಿಳಿಸಲಾಗಿದೆ.

ಕರಣ್‌ ಅದಾನಿ ಹೇಳಿದ್ದೇನು?
ಆಲ್‌ ಇಂಡಿಯಾ ಮ್ಯಾನೆಜ್ಮೆಂಟ್‌ ಅಸೋಸಿಯೇಷನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಫಾರ್ಮುಲಾ 1 ಅನ್ನು ಭಾರತಕ್ಕೆ ಮರಳಿ ತರುವ ವಿಷಯದಲ್ಲಿ ನಾನು ವೈಯಕ್ತಿಕವಾಗಿ ತೊಡಗಿಸಿಕೊಂಡಿದ್ದೇನೆ. ಭಾರತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಸಂಬಂಧ ನಾನು ಮಾತುಕತೆ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ಅದಾನಿ ಗ್ರೂಪ್‌ ಫಾರ್ಮುಲಾ 1 ಟ್ರ್ಯಾಕ್‌ ಹೊಂದಿರುವ ದಿವಾಳಿಯಾಗಿರುವ ಜೆಪಿ ಗ್ರೂಪ್‌(Jaypee Group) ಅನ್ನು ಖರೀದಿಸಲು ಮಾತುಕತೆ ನಡೆಸುತ್ತಿದೆ. ಈ ಖರೀದಿ ಪೂರ್ಣಗೊಂಡರೆ ಮತ್ತೆ ಭಾರತದಲ್ಲಿ ಫಾರ್ಮುಲಾ 1 ರೇಸ್‌ ಆರಂಭವಾಗುವ ಸಾಧ್ಯತೆಯಿದೆ.

3 ವರ್ಷ ನಡೆದಿತ್ತು ರೇಸ್‌!
ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ 5.125 ಕಿ.ಮೀ ಉದ್ದದ ಬುದ್ಧ ಸರ್ಕ್ಯೂಟ್‌(Buddh International Circuit) ರೇಸ್‌ ಟ್ರ್ಯಾಕ್‌ ಇದ್ದು 2011 ರಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗಿದೆ. ಜೆಪಿ ಗ್ರೂಪ್‌ ಮಾಲೀಕತ್ವವನ್ನು ಹೊಂದಿರುವ ಈ ರೇಸ್‌ ಟ್ರ್ಯಾಕ್‌ನಲ್ಲಿ ಫಾರ್ಮುಲಾ ಒನ್‌ ಸ್ಪರ್ಧೆಗಳು ನಡೆದಿದ್ದವು. 2014ರಲ್ಲಿ ಅಖಿಲೇಶ್‌ ಯಾದವ್‌ ಅಧಿಕಾರದ ಅವಧಿಯಲ್ಲಿ ತೆರಿಗೆ (Tax) ವಿವಾದ ಉಂಟಾಗಿ ಫಾರ್ಮುಲಾ ಒನ್‌ ಸ್ಪರ್ಧೆ ಸ್ಥಗಿತಗೊಂಡಿತ್ತು. ಪ್ರಸ್ತುತ ಇಲ್ಲ ಫಾರ್ಮುಲಾ ರಿಜಿನಲ್‌ ಇಂಡಿಯನ್‌ ಚಾಂಪಿಯನ್‌ಶಿಪ್‌ ಮತ್ತು ಫಾರ್ಮುಲಾ 4 ಇಂಡಿಯನ್‌ ಚಾಂಪಿಯನ್‌ಶಿಪ್‌ ಸ್ಪರ್ಧೆ ನಡೆಯುತ್ತಿದೆ.

ತೆರಿಗೆ ವಿವಾದ ಏನು?
ಬುದ್ಧ ಅಂತರರಾಷ್ಟ್ರೀಯ ಸರ್ಕ್ಯೂಟ್ ಉತ್ತರ ಪ್ರದೇಶ ರಾಜ್ಯದಲ್ಲಿದೆ. ಇದಕ್ಕೆ ಸ್ಥಳೀಯ ತೆರಿಗೆಗಳು ಮತ್ತು ರಾಷ್ಟ್ರೀಯ ಕಸ್ಟಮ್ಸ್ ಸುಂಕ ವಿಧಿಸಲಾಗುತ್ತದೆ. ಈ ಕ್ರೀಡೆಯಿಂದ ಕೋಟ್ಯಂತರ ರೂ. ಆದಾಯವನ್ನು ಸರ್ಕಾರ ನಿರೀಕ್ಷೆ ಮಾಡಿತ್ತು. ಆದರೆ ಆಯೋಜಕರು ತೆರಿಗೆಯಿಂದ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ ಅಂದಿನ ಅಖಿಲೇಶ್‌ ಸರ್ಕಾರ ತೆರಿಗೆ ವಿನಾಯಿತಿ ನೀಡಲು ಒಪ್ಪಲಿಲ್ಲ.

ಸರ್ಕಾರ ಗ್ರಾಂಡ್‌ ಪ್ರಿಕ್ಸ್‌ ಕ್ರೀಡೆಯಲ್ಲ ಇದೊಂದು ಮನೋರಂಜನಾ ಉದ್ಯಮ ಎಂದು ಕರೆದಿದೆ. ಅಷ್ಟೇ ಅಲ್ಲದೇ ಆಮದು ಮಾಡಿಕೊಂಡ ರೇಸಿಂಗ್ ಉಪಕರಣಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಹಾಕಲಾಯಿತು. ಈ ತೆರಿಗೆ ಮತ್ತು ಕಾರ್ಯಾಚರಣೆಯ ವೆಚ್ಚಗಳಿಂದ ಆಯೋಜಕರಿಗೆ ಹೊರೆ ಅನಿಸಿತು. ಇದೆ ಅಲ್ಲದೇ ಇನ್ನೊಂದು ಪ್ರಮುಖ ಕಾರಣವೂ ಇದೆ. ಜೆಪಿ ಗ್ರೂಪ್‌ ಭವಿಷ್ಯದಲ್ಲಿ ಎಫ್‌1 ರೇಸ್‌ ಆಯೋಜನೆಯಿಂದ ಕಂಪನಿಗೆ ಬಹಳ ಲಾಭವಿದೆ ಎಂದು ಪರಿಗಣಿಸಿ ಅತ್ಯುತ್ತಮ ಟ್ರ್ಯಾಕ್‌ ಅಭಿವೃದ್ಧಿ ಪಡಿಸಿತ್ತು.

ಅಭಿವೃದ್ಧಿ ಪಡಿಸುತ್ತಿರುವ ಸಮಯದ ಅಂದರೆ 2008 ರಲ್ಲಿ ವಿಶ್ವಾದ್ಯಂತ ರಿಸೆಷನ್‌ ಅಥವಾ ಆರ್ಥಿಕ ಹಿಂಜರಿತ ಸಂಭವಿಸಿತು. ಪರಿಣಾಮ ಜೆಪಿ ಕಂಪನಿಗೆ ಬಹಳ ನಷ್ಟವಾಯ್ತು. ಹೀಗಿದ್ದರೂ ರೇಸ್‌ ಆಯೋಜಿಸಿತ್ತು. ಒಂದು ಲಕ್ಷ ಜನ ಅಭಿಮಾನಿಗಳು ರೇಸ್‌ ನೋಡಿದ್ದರು. 2011 ರಲ್ಲಿ ಕಂಪನಿ ಟಿಕೆಟ್‌ ಆದಾಯದಿಂದ 150 ಕೋಟಿ ರೂ. ನಿರೀಕ್ಷೆ ಮಾಡಿತ್ತು. ಆದರೆ 140 ಕೋಟಿ ರೂ. ಆದಾಯ ಬಂದಿತ್ತು. 2012 ರಲ್ಲಿ 76 ಕೋಟಿ 2013 ರಲ್ಲಿ 113 ಕೋಟಿ ರೂ ಆದಾಯ ಬಂದಿತ್ತು. ನಿರೀಕ್ಷಿತ ಪ್ರಮಾಣದ ಆದಾಯ ಬಾರದ ಕಾರಣ ಜೆಪಿ ಸ್ಪೋರ್ಟ್ಸ್‌ 160 ಕೋಟಿ ರೂ. ನಷ್ಟವಾಯಿತು. ಈ ನಷ್ಟದ ಬೆನ್ನಲ್ಲೇ ತೆರಿಗೆ ಪಾವತಿಸುವಂತೆ ನೋಟಿಸ್‌ ಬಂದಿತ್ತು.

ಸುಪ್ರೀಂ ಕೋರ್ಟ್‌ ಹೇಳಿದ್ದೇನು?
ತೆರಿಗೆ ವಿವಾದ ಸುಪ್ರೀಂ ಮೆಟ್ಟಿಲೇರಿತ್ತು. ಉತ್ತರ ಪ್ರದೇಶದ ಸರ್ಕಾರದ ವಾದವನ್ನು ಪುರಸ್ಕರಿಸಿದ ಕೋರ್ಟ್‌ ಇದು ಕ್ರೀಡೆಯಲ್ಲ ಇದು ಮನರಂಜನಾ ಕ್ರೀಡೆ ಎಂದು ಹೇಳಿ ತೆರಿಗೆ ಪಾವತಿಸುವಂತೆ ಸೂಚಿಸಿತು. ರೇಸ್‌ ಟ್ರ್ಯಾಕ್‌ ಮುಂದುವರಿಯಬೇಕು ಎಂದು ಹೇಳಿ 1500 ಮಿಲಿಯನ್‌ ಡಾಲರ್‌ ಹಣವನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಪಾವತಿಸುವಂತೆ ಸೂಚಿಸಿತು. ಎಫ್‌1 ಆಯೋಜಕರು ಎಲ್ಲಾ ತೆರಿಗೆಯಿಂದ ಮುಕ್ತ ಇರಬೇಕೆಂದು ಬಯಸಿದ್ದರು. ಆದರೆ ಭಾರತದಲ್ಲಿ ತೆರಿಗೆ ಪಾವತಿಸಬೇಕೆಂದು ಸುಪ್ರೀಂ ಕೋರ್ಟ್‌ ಹೇಳಿದ್ದರಿಂದ ಜೆಪಿ ಕಂಪನಿಗೆ ಸಮಸ್ಯೆಯಾಯಿತು. ಇದನ್ನೂ ಓದಿ:  ಏ.1 ರಿಂದ ಇ20 ಮಿಶ್ರಿತ RON 95 ಇರೋ ಪೆಟ್ರೋಲ್‌ ಮಾರಾಟ ಕಡ್ಡಾಯ

ಮುಂದೆ ನಡೆಯುತ್ತಾ?
ಯಾವುದೇ ಕ್ರೀಡೆಗೆ ಸರ್ಕಾರದ ಪ್ರೋತ್ಸಾಹ ಬೇಕೇ ಬೇಕು. ರೇಸ್‌ಗೆ ಆಗುವ ಖರ್ಚನ್ನು ಟಿಕೆಟ್‌ ಸೇಲ್‌ ಮಾಡಿ ಸರಿದೂಗಿಸಲು ಸಾಧ್ಯವಿಲ್ಲ. ಒಂದು ರೇಸ್‌ ಆಯೋಜನೆ ಮಾಡುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆ ದೇಶಕ್ಕೆ ಬರುತ್ತಾರೆ. ಪರಿಣಾಮ ಬೇರೆ ಬೇರೆ ಆರ್ಥಿಕ ಚಟುವಟಿಕೆಗೆಳು ನಡೆಯುತ್ತದೆ. ಸೌದಿ ಅರೇಬಿಯಾ, ಕತಾರ್, ಅಬುಧಾಬಿ ಮತ್ತು ಸಿಂಗಾಪುರಗಳು ಎಫ್‌1 ಅನ್ನು ಪ್ರವಾಸೋದ್ಯಮ ದೃಷ್ಟಿಯಿಂದ ನೋಡುತ್ತವೆ.

ಈಗ ಐಪಿಎಲ್‌ ಈಗ ಭಾರತದಲ್ಲಿ ಬಹಳಷ್ಟು ಯಶಸ್ವಿಯಾಗಿದೆ. ಐಪಿಎಲ್‌ನಿಂದಾಗಿ ಕೋಟ್ಯಂತರ ರೂ. ವ್ಯವಹಾರ ನಡೆಯುತ್ತದೆ ಅದೇ ರೀತಿಯಾಗಿ ಫಾರ್ಮುಲಾ 1 ಆಯೋಜಿಸಿದರೆ ಕೋಟ್ಯಂತರ ರೂ. ವ್ಯವಹಾರ ನಡೆಯುತ್ತದೆ. ವಿಮಾನ ಕಂಪನಿಗಳಾಗಬಹುದು, ಹೋಟೆಲ್‌ಗಳು, ಪ್ರವಾಸಿ ತಾಣಗಳು, ಕ್ಯಾಬ್‌ಗಳು ಹೀಗೆ ಹಲವು ಮಂದಿ ಕ್ರೀಡೆಯಿಂದ ಲಾಭವಾಗುತ್ತದೆ.

ಏಷ್ಯಾದಲ್ಲಿ ಜಪಾನ್‌, ಸಿಂಗಾಪುರ, ಕತಾರ್, ಸೌದಿ ಅರೇಬಿಯಾ, ಯುಎಇಯಲ್ಲಿ ಎಫ್‌1 ನಡೆಯುತ್ತಿದೆ. ಈ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಬಹಳ ಚೆನ್ನಾಗಿದೆ. ಅಷ್ಟೇ ಅಲ್ಲದೇ ಭಾರತದ ರೇಸ್‌ ಅಭಿಮಾನಿಗಳು ಈ ದೇಶಗಳಿಗೆ ಹೋಗಿ ರೇಸ್‌ ನೋಡಿ ಬರುತ್ತಾರೆ. ಒಂದು ವೇಳೆ ಅದಾನಿ ಗ್ರೂಪ್‌ ತೆಕ್ಕೆಗೆ ರೇಸ್‌ ಟ್ರ್ಯಾಕ್‌ ಬಂದರೆ ಮತ್ತೆ ಭಾರತದಲ್ಲಿ ಫಾರ್ಮುಲಾ 1 ರೇಸ್‌ ಆರಂಭವಾಗುವ ಸಾಧ್ಯತೆಯಿದೆ.

2027ಕ್ಕೆ ಮೋಟೋಜಿಪಿ
ಮೋಟೋಜಿಪಿ (MotoGP) ರೇಸ್‌ ಭಾರತಲ್ಲಿ ನಡೆಯುವ ಸಾಧ್ಯತೆಯಿದೆ. ಉತ್ತರ ಪ್ರದೇಶ (Uttar Pradesh) ಸರ್ಕಾರ ಮೋಟಾರ್‌ ಸ್ಪೋರ್ಟ್ ಈವೆಂಟ್‌ ಮತ್ತು ಸಲಹಾ ಕಂಪನಿಯಾದ ಎವಿಡಬ್ಲ್ಯೂ ಗ್ಲೋಬಲ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ 2027 ರಲ್ಲಿ ನೋಯ್ಡಾದಲ್ಲಿರುವ ಬುದ್ಧ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ(Buddh International Circuit) ರೇಸ್‌ ನಡೆಯುವ ಸಾಧ್ಯತೆಯಿದೆ. ಮೋಟೋಜಿಪಿ ಜೊತೆಗೆ ಏಷ್ಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್ ಬುದ್ಧ ಸರ್ಕ್ಯೂಟ್‌ಗೆ ಮರಳುವ ಸಾಧ್ಯತೆಯೂ ಇದೆ

2023 ರಲ್ಲಿ ಮೋಟೋಜಿಪಿ ಸ್ಪರ್ಧೆ ನಡೆದಿತ್ತು. ಆದರೆ ರೇಸ್‌ ಆಯೋಜಿಸಿದವರು ಬಾಕಿ ಹಣವನ್ನು ಪಾವತಿಸದೇ ಇರುವುದು, ಕಾರ್ಯಾಚರಣಾ ವೈಫಲ್ಯ, ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಮೋಟೋ ಜಿಪಿ ಭಾರತವನ್ನು ತೊರೆದಿತ್ತು.

ಭಾರತವು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದೆ. 20 ಕೋಟಿಗೂ ಹೆಚ್ಚು ಮೋಟಾರ್‌ಸೈಕಲ್‌ಗಳನ್ನು ಹೊಂದಿದ್ದು ಮೋಟೋ ಜಿಪಿಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.

Share This Article