ಚಿಂತಾಮಣಿಯಲ್ಲಿ ಭೂಕಂಪನದ ಅನುಭವ- ಭಯಭೀತರಾದ ಜನ

Public TV
1 Min Read

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಸೇರಿ ಹತ್ತು ಹಲವು ಗ್ರಾಮಗಳಲ್ಲಿ ಕಳೆದ ರಾತ್ರಿ ಭೂಕಂಪನದ ಅನುಭವ ಆಗಿದ್ದು, ಜನ ಭಯಭೀತರಾಗಿದ್ದಾರೆ.

ಕಳೆದ ರಾತ್ರಿ 08 ಗಂಟೆ 50 ನಿಮಿಷ ಸುಮಾರಿಗೆ ಭೂಮಿ ಕಂಪಿಸಿದೆ. ಜೋರು ಶಬ್ದ ಕೇಳಿಬಂದಿದ್ದು ಎರಡು ಬಾರಿ ಭೂಕಂಪನದ ಅನುಭವ ಆಗಿದೆ. ಮನೆಗಳಲ್ಲಿದ್ದ ಪಾತ್ರೆ, ವಸ್ತುಗಳು ಕೆಳಗೆ ಬಿದ್ದಿವೆ. ಇದರಿಂದ ಜನ ಆತಂಕಕ್ಕೊಳಗಾಗಿ ಮನೆಯಿಂದ ಹೊರ ಬಂದಿದ್ದಾರೆ. ರಾತ್ರಿ ಮನೆಯೊಳಗೆ ಮಲಗೋಕು ಜನ ಹೆದರುವಂತಾಗಿ ಬೀದಿಯಲ್ಲೇ ಕಾಲ ಕಳೆದಿದ್ದಾರೆ.

ಯಾವ ಗ್ರಾಮಗಳಲ್ಲಿ ಅನುಭವ:
ಮಿಟ್ಟಹಳ್ಳಿ, ನಂದನವನ, ಅಪ್ಪಸಾನಹಳ್ಳಿ, ಆಗ್ರಹಾರಹಳ್ಳಿ, ಗೋನೇನಹಳ್ಳಿ, ವೆಂಕಟರೆಡ್ಡಿಪಾಳ್ಯ, ಕೊಮ್ಮೇಪಲ್ಲಿ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ಇದನ್ನೂ ಓದಿ: ಕೇರಳ ಪೊಲೀಸರಿಂದ ಶೃಂಗೇರಿ ಮೂಲದ ನಕ್ಸಲರ ಬಂಧನ

ಅಧಿಕಾರಿಗಳ ಭೇಟಿ:
ಈ ವಿಷಯ ತಿಳಿದು ಗ್ರಾಮಗಳಿಗೆ ಕೆಂಚಾರ್ಲಹಳ್ಳಿ ಪೊಲೀಸರು ಹಾಗೂ ಚಿಂತಾಮಣಿ ತಹಶೀಲ್ದಾರ್ ಹನುಮಂತರಾಯಪ್ಪ ಹಾಗೂ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಲ್ಲದೆ ಜನರಿಗೆ ಧೈರ್ಯ ತುಂಬಿ ಅತಂಕ ದೂರ ಸರಿಸುವ ಕೆಲಸ ಮಾಡಿದ್ರು. ಭೂಕಂಪನದ ಭಯದಿಂದ ಮನೆಯಿಂದ ಹೊರಗೆ ಇದ್ದ ಜನ ಮನೆಯೊಳಗೆ ಮಲಗೋಕೆ ಹೆದರುತ್ತಿದ್ರು. ಅಧಿಕಾರಿಗಳ ಅಭಯದಿಂದ ಮುಂಜಾನೆ ನಿದ್ದೆಗೆ ಜಾರಿದ್ದಾರೆ.

ಮತ್ತೆ ಭೂಮಿ ಕಂಪಿಸಿದ ಅನುಭವ:
ಅಧಿಕಾರಿಗಳ ಅಭಯದಿಂದ ಮುಂಜಾನೆ ಮಲಗಿದ್ದವರಿಗೆ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿ ನಿದ್ದೆಯಿಂದ ಎದ್ದು ಕೂತಿದ್ದಾರೆ. ಈಗಲೂ ಗ್ರಾಮದ ಜನರಲ್ಲಿ ಭೀತಿ ಮುಂದುವರೆದಿದ್ದು..11 ಗಂಟೆಗೆ ಭೂ ಕಂಪನದ ನಿಖರ ವರದಿ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕೆಲ ಮನೆಗಳು ಬಿರುಕು ಸಹ ಬಿಟ್ಟಿವೆ. ಜನರ ಆತಂಕ ಮುಂದುವರಿದಿದೆ.

Share This Article
Leave a Comment

Leave a Reply

Your email address will not be published. Required fields are marked *