ಅಕ್ರಮ ಮದ್ಯ ಮಾರಾಟದ ಆರೋಪ – ಅಬಕಾರಿ ಇಲಾಖೆಯ ವಾಹನದಲ್ಲೇ ವ್ಯಕ್ತಿ ಸಾವು

Public TV
1 Min Read

ಬಳ್ಳಾರಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಎನ್ನುವ ಆರೋಪದ ಅಂಗಡಿ ಮೇಲೆ ಅಬಕಾರಿ ಇಲಾಖೆಯ ದಾಳಿ ಮಾಡಿದ್ದು, ಬಳಿಕ ವ್ಯಕ್ತಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗುವಾಗ ಕೊನೆಯುಸಿರೆಳೆದಿರುವ ಘಟನೆ ಬಳ್ಳಾರಿ ತಾಲೂಕಿನಲ್ಲಿ ನಡೆದಿದೆ.

ತಿಪುನಾಯ್ಕ್, ಹಲಕುಂದಿ ಗ್ರಾಮದ ಪುಟ್ಟ ಅಂಗಡಿಯೊಂದನ್ನಿಟ್ಟು ಜೀವನ ಸಾಗಿಸುತ್ತಿದ್ದರು. ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಇವರ ಮೇಲೆ ಕೇಳಿ ಬಂದಿತ್ತು. ಆದ್ದರಿಂದ ತಿಪುನಾಯ್ಕ್ ನ ಅಂಗಡಿ ಮೇಲೆ ಬಳ್ಳಾರಿ ಅಬಕಾರಿ ಇಲಾಖೆಯ ಪೊಲೀಸರು ದಾಳಿ ಮಾಡಿ ಅಂಗಡಿಯಲ್ಲಿದ್ದ ತಿಪುನಾಯ್ಕ್ ನ ಕೊರಳ ಪಟ್ಟಿ ಹಿಡಿದು ಅಮಾನವೀಯವಾಗಿ ಎಳೆದು ತಮ್ಮ ವಾಹನದಲ್ಲಿ ಕೂರಿಸಿಕೊಂಡಿದ್ದಾರೆ.

ಅಬಕಾರಿ ಇಲಾಖೆಯ ವಾಹನ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ತಿಪುನಾಯ್ಕ್ ಕೊನೆಯುಸಿರೆಳೆದಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳು ತಿಪುನಾಯ್ಕ್ ನ ಅಂಗಡಿ ಮೇಲೆ ದಾಳಿ ಮಾಡಿ ತಿಪುನಾಯ್ಕ್ ನಿಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸುತ್ತಿದ್ದಾರೆ.

ತಿಪುನಾಯ್ಕ್ ಮೂಲತಃ ಬಳ್ಳಾರಿ ತಾಲೂಕಿನ ಹೊನ್ನಳ್ಳಿ ತಾಂಡದವರು. ಇವರಿಗೆ ನಾಲ್ಕು ಜನ ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನಿದ್ದಾನೆ. ಜೀವನಕ್ಕೆಂದು ಊರು ತೊರೆದು ಹಲಕುಂದಿ ಗ್ರಾಮಕ್ಕೆ ಬಂದು ಸೇರಿದ್ದು, ಜೀವನೋಪಾಯಕ್ಕೆ ಪುಟ್ಟ ಅಂಗಡಿಯನ್ನಿಟ್ಟು ಜೀವನ ಸಾಗಿಸುತ್ತಿದ್ದರು.

ಆದರೆ ಅಕ್ರಮ ಮದ್ಯ ಮಾರಾಟ ಮಾಡುತ್ತಾರೆ ಅನ್ನೊ ಆರೋಪಕ್ಕೆ ಇವರ ಅಂಗಡಿ ಮೇಲೆ ದಾಳಿ ಮಾಡಿದ ಬಳ್ಳಾರಿಯ ಅಬಕಾರಿ ಪೊಲೀಸರು, ಕಾನೂನು ರೀತಿ ಕ್ರಮ ತೆಗೆದುಕೊಳ್ಳುವುದು ಬಿಟ್ಟು ಕಾನೂನನ್ನ ಕೈಗೆತ್ತಿಕೊಂಡು ಇಡೀ ಅಬಕಾರಿ ಇಲಾಖೆಯೇ ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *