ಸನಾತನ ಧರ್ಮ, ರಾಷ್ಟ್ರೀಯತೆ ಮೈಗೂಡಿಸಿಕೊಂಡ ಪಕ್ಷ ಸೇರಿದ್ದೇನೆ: ಭಾಸ್ಕರ್‌ ರಾವ್‌

Public TV
2 Min Read

ಬೆಂಗಳೂರು: ಸನಾತನ ಧರ್ಮಕ್ಕೆ ಸೇರಿದ ಪಕ್ಷ, ರಾಷ್ಟ್ರೀಯತೆ ಮೈಗೂಡಿಸಿಕೊಂಡ ಪಕ್ಷವನ್ನು ಸೇರಿದ್ದೇನೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ ರಾವ್ (Bhaskar Rao) ಹೇಳಿದ್ದಾರೆ.

ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ ರಾವ್ ಅವರಿಗೆ ಧ್ವಜ ನೀಡಿ, ಶಾಲು ಹಾಕಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar Kateel)  ಪಕ್ಷಕ್ಕೆ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಅವರು, ನಾನು ಬಾಲ್ಯಕಾಲದಿಂದ ಸನಾತನ ಧರ್ಮ, ರಾಷ್ಟ್ರೀಯತೆಗೆ ಬದ್ಧನಾಗಿದ್ದ ವ್ಯಕ್ತಿ. ಆಮ್ ಆದ್ಮಿ ಪಕ್ಷದಲ್ಲಿ (Aam Aadmi Party) ಒಂದು ವರ್ಷ ಇದ್ದರೂ ಅದು ರಾಜ್ಯದಲ್ಲಿ ಬೆಳೆಯುವ ಸಾಧ್ಯತೆ ಕಡಿಮೆ ಅನಿಸಿತು. ಮೋದಿಜಿ, ಅಮಿತ್ ಶಾ, ಜೆ.ಪಿ.ನಡ್ಡಾ, ಬಿ.ಎಲ್.ಸಂತೋಷ್, ಯಡಿಯೂರಪ್ಪ, ಕಟೀಲ್, ಪ್ರಹ್ಲಾದ್‌ ಜೋಶಿ ಅವರ ಪಕ್ಷದ ಜೊತೆ ಇರಲು ಬಂದಿದ್ದೇನೆ. ಪಕ್ಷದ ಕಾರ್ಯಕ್ರಮಗಳಿಗೆ ಸಹಕರಿಸುವೆ. ಅಖಂಡ ಭಾರತವನ್ನು ಗಟ್ಟಿಯಾಗಿ ಇಡಲು ಇದೊಂದೇ ಪಕ್ಷದಿಂದ ಸಾಧ್ಯ ಎಂದರು.

ಪಕ್ಷ ಕಟ್ಟುವಾಗ ಯುವಕರು, ಮಹಿಳೆಯರಿಗೆ ಆದ್ಯತೆ ಕೊಡುವುದು ಖುಷಿ ಕೊಟ್ಟಿದೆ. ಪಕ್ಷದ ಮುಖಂಡರ ಮಾರ್ಗದರ್ಶನದಂತೆ ಜವಾಬ್ದಾರಿ ವಹಿಸಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಹಾಡಹಗಲೇ ಕೊಲೆ – ಯುಪಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಆಪ್ತನ ಮನೆ ನೆಲಸಮ

ನಳಿನ್‍ಕುಮಾರ್ ಕಟೀಲ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂಬ ನಿರೀಕ್ಷೆ ಮತ್ತು ಜನಬೆಂಬಲ ಕಾಣುತ್ತಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷ ಗಟ್ಟಿ ಮಾಡಿ ರಾಜಕಾರಣದ ಮೂಲಕ ಸೇವೆ ಮಾಡಲು ಬಂದಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಅವರು ನಿವೃತ್ತಿ ಬಳಿಕ ಆಪ್ ಸೇರಿ ಇದೀಗ ಕಲ್ಯಾಣ ಕರ್ನಾಟಕದ ಉದ್ದೇಶದಿಂದ ಪಕ್ಷ ಸೇರಿದ್ದಾರೆ. ಅವರ ಸಹವರ್ತಿಗಳನ್ನೂ ಸ್ವಾಗತಿಸುವೆ ಎಂದರು.

ಆಮ್ ಆದ್ಮಿ ಪಕ್ಷದ ರಾಜ್ಯ ಸಹಕಾರ್ಯದರ್ಶಿ ವಿಜಯ್ ಶಾಸ್ತ್ರಿಮಠ್, ಮಾಜಿ ಮುಖ್ಯವಕ್ತಾರ ಶರತ್ ಖಾದ್ರಿ, ಸಮಾಜಸೇವಕ ಶಿವಶರ್ಮ, ಬಸವನಗುಡಿ ವಿಧಾನಸಭಾ ಕ್ಷೇತ್ರದ ಮುಖಂಡರಾದ ಆರ್ಯನ್, ಅಂಜನ್‌ ರಾವ್‌, ಬೆಂಗಳೂರು ಮಹಾನಗರದ ಪ್ರಧಾನ ಕಾರ್ಯದರ್ಶಿ ದಿಲೀಪ್ ಗೌಡ ಅವರು ಆಪ್ ತೊರೆದು ಬಿಜೆಪಿ ಸೇರಿದರು.

Share This Article
Leave a Comment

Leave a Reply

Your email address will not be published. Required fields are marked *