ಇವಿಎಂನಲ್ಲಿ ಅಡ್ಜಸ್ಟ್‌ಮೆಂಟ್‌, Give & Take Policy ಮಾಡ್ತಿದ್ದಾರೆ: ಸತೀಶ್‌ ಜಾರಕಿಹೊಳಿ

Public TV
2 Min Read

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿಯವರು (Satish Jarkiholi) ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (Maha Vikas Aghadi) ಒಕ್ಕೂಟಕ್ಕೆ ಸೋಲಾದ ಬೆನ್ನಲ್ಲೇ ಇವಿಎಂ (EVM) ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯ ಕಾಂಗ್ರೆಸ್ (Congress) ಭವನದಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಮಹಾ ವಿಕಾಸ್ ಅಘಾಡಿಗೆ ಸೋಲಾಗಿದೆ. ಇವಿಎಂ ಮಷೀನ್ ಇರುವವರೆಗೂ ಈ ರೀತಿ ಎಲ್ಲಾ ಆಗುತ್ತದೆ. ಇವಿಎಂ ಬಗ್ಗೆ ಸಾಕಷ್ಟು ಅನುಮಾನ ಇದೆ. ಸಾಕಷ್ಟು ಕಡೆಗಳಲ್ಲಿ ಇವಿಎಂ ಬಗ್ಗೆ ಚರ್ಚೆ ಆಗುತ್ತಿದೆ ಎಂದರು.

ಒಂದು ಕಡೆ ಕೊಡ್ತಾರೆ, ಇನ್ನೊಂದು ಕಡೆ ಕಸಿದುಕೊಳ್ತಾರೆ. ಜಮ್ಮು ನಮಗೆ ಕೊಟ್ರೂ, ಹರಿಯಾಣವನ್ನು ಬಿಜೆಪಿಯವರು ತೆಗೆದುಕೊಂಡ್ರು. ಈ ರೀತಿ ಗೀವ್ & ಟೆಕ್ ಪಾಲಿಸಿ ಮಾಡ್ತಿದ್ದಾರೆ. ಅವರಿಗೆ ಬೇಕಾದದ್ದನ್ನು ತೆಗೆದುಕೊಳ್ತಾರೆ, ಬೇಡದ್ದನ್ನ ಬಿಡ್ತಾರೆ. ಇವಿಎಂನಲ್ಲೂ ಅಡ್ಜಸ್ಟ್ಮೆಂಟ್ ಇದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಶಿಗ್ಗಾಂವಿಯಲ್ಲಿ ಐದು ಬಾರಿ ಸೋಲಲು ನಾಯಕತ್ವದ ಸಮಸ್ಯೆ ಇತ್ತು. ಹಿಂದೂ ಮುಸ್ಲಿಂ ಅನ್ನೋ ವಿಚಾರ ಅಲ್ಲಿ ಮುಖ್ಯ ಎನಿಸಿತ್ತು. ಶಿವಾನಂದ ಪಾಟೀಲ್, ಮಾನೆಯವರು ಮುನ್ನೆಲೆಗೆ ಬಂದಿದ್ದಕ್ಕೆ ಮುಸ್ಲಿಂ ಅನ್ನೋದನ್ನು ಬಿಟ್ಟು ಕಾಂಗ್ರೆಸ್ ಅಭ್ಯರ್ಥಿ ಎಂಬುದು ಮುಖ್ಯವಾಯ್ತು ಎಂದಿದ್ದಾರೆ.

ಅಹಿಂದ ವರ್ಗಕ್ಕೆ ನ್ಯಾಯ ಕೊಡಬೇಕು ಎಂದು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೆವು. ಅಹಿಂದ ವರ್ಗ ಒಂದಾಯಿತು ಇದರಿಂದ ಗೆಲುವಾಗಿದೆ. ಮಾಜಿ ಮುಖ್ಯಮಂತ್ರಿ, ಪ್ರಬಲ ರಾಜಕಾರಣಿ ವಿರುದ್ಧ ಚುನಾವಣೆ ಹೇಗೆ ಮಾಡ್ತಾರೆ ಎಂಬ ಪ್ರಶ್ನೆ ಇತ್ತು. ಕೆಲವು ತಂತ್ರಗಾರಿಕೆ ಮೂಲಕ ನಾವು ಹೇಗೆ ಚುನಾವಣೆ ಮಾಡುತ್ತೆವೆಯೋ ಅದೇ ಮಾದರಿಯಲ್ಲಿ ಚುನಾವಣೆ ಮಾಡಿದ್ದೇವೆ. ಈ ಸಾರಿ ಚುನಾವಣೆಯಿಂದ ಮುಸ್ಲಿಮರಿಗೆ ಟಿಕೆಟ್ ಕೊಟ್ಟರೆ ಗೆಲ್ತಾರೆ ಎಂಬ ಸಂದೇಶ ಹೋಗಿದೆ. ಶಿಗ್ಗಾಂವಿ ಗೆಲವು ನಮಗೆ ಡಬಲ್ ಪ್ರಮೋಷನ್ ಆಗಿದೆ. ಡಿಸಿಎಂ ಸ್ಥಾನ ಇಲ್ಲದೇ ನಾವು ಇಲ್ಲಿ ಗೆಲ್ಲಿಸಿಕೊಟ್ಟಿದ್ದೇವೆ ಎಂದಿದ್ದಾರೆ.

ರಾಜ್ಯದ ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ (By Election) ಕಾಂಗ್ರೆಸ್ ಗೆಲ್ಲಲು ಅಭಿವೃದ್ಧಿ, ಗ್ಯಾರಂಟಿ ಹಾಗೂ ಕಾರ್ಯಕರ್ತರು ಕಾರಣ. ಶಾಸಕರು, ಸಿಎಂ ಬೆಂಬಲದಿಂದ ಗೆಲ್ಲಲು ಸಾಧ್ಯವಾಗಿದೆ. ಗೆದ್ದ ಅಭ್ಯರ್ಥಿಗಳಿಗೆ, ನಮ್ಮ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಸಿಎಂ ಬದಲಾವಣೆ ವಿಚಾರವಾಗಿ, ಐದು ವರ್ಷ ಅವರೇ ಇರ್ತಾರೆ. ಇನ್ನೂ ವಕ್ಫ್ ವಿಚಾರದಲ್ಲಿ ಜಾಸ್ತಿ ಪರಿಣಾಮ ಆಗಿದ್ದು ಮುಸ್ಲಿಮರಿಗೆ ಎಂದಿದ್ದಾರೆ.

Share This Article