ಬಶೀರ್ ಮನೆಗೆ ಹೋಗ್ಬೇಕು ಅನ್ನೋ ಕಾರಣಕ್ಕೆ ದೀಪಕ್ ಮನೆಗೂ ಭೇಟಿ ನೀಡಿದ್ರು- ಸಿಎಂ ವಿರುದ್ಧ ಈಶ್ವರಪ್ಪ ಟೀಕೆ

Public TV
1 Min Read

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಕೊಲೆಗಡುಕರ ಸ್ವರ್ಗ. ಯಾರನ್ನ ಬೇಕಾದರೂ ಕೊಲೆ ಮಾಡಿ. ಸರ್ಕಾರ ಅವರನ್ನು ರಕ್ಷಿಸುತ್ತದೆ. ಮಂಗಳೂರಿನಲ್ಲಿ ಬಶೀರ್ ಮನೆಗೆ ಹೋಗಬೇಕು ಎಂಬ ಕಾರಣಕ್ಕೆ ದೀಪಕ್ ಮನೆಗೂ ಭೇಟಿ ನೀಡಿದ್ರು. ಇದೂವರೆಗೂ ಹತ್ಯೆ ಆದ ಯಾರೊಬ್ಬರ ಮನೆಗೂ ಹೋಗಿಲ್ಲ ಅಂದ್ರು.

ಸಾಧನಾ ಸಮಾವೇಶ ಸರ್ಕಾರಿ ವೆಚ್ಚದಲ್ಲಿ ಮಾಡಬೇಡಿ. ಯಾರದ್ದೊ ದುಡ್ಡು- ಸಿದ್ದಪ್ಪನ ಜಾತ್ರೆ. ಮಂಗನ ಕೈಲಿ ಮಾಣಿಕ್ಯ ಕೊಟ್ಟಂತೆ ಇವರಿಗೆ ಅಧಿಕಾರ ಕೊಟ್ಟಂತಾಗಿದೆ. ಹುಚ್ಚನ ಕೈಲಿ ಅಧಿಕಾರ ಕೊಟ್ಟಿದಿವಿ. ಇದಕ್ಕಾಗಿ ಇವನ್ನೆಲ್ಲಾ ನೋಡಬೇಕಾಗಿದೆ ಅಂತ ಕಿಡಿಕಾರಿದ್ರು.

ಜಿಲ್ಲಾಧಿಕಾರಿ ಇನ್ನಿತರ ಅಧಿಕಾರಿಗಳನ್ನು ವೇದಿಕೆ ಮೇಲೆ ಕೂರಿಸಿಕೊಂಡು ರಾಜಕೀಯ ಭಾಷಣ ಮಾಡುತ್ತಿದ್ದಾರೆ. ಸರ್ಕಾರದ ಸಾಧನೆಗಳನ್ನು ಹೇಳುವುದನ್ನು ಬಿಟ್ಟು ವಿಪಕ್ಷಗಳನ್ನು ಟೀಕೆ ಮಾಡಲು ಸಾರ್ವಜನಿಕರ ಹಣ ಬಳಸುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿ ತನ್ನ ನೈತಿಕತೆ ತೋರಿಸಬೇಕು. ಕಾಂಗ್ರೆಸ್ ಸಮಾವೇಶ ಮಾಡಲಿ. ಸರ್ಕಾರಿ ವೆಚ್ಚದಲ್ಲಿ ಮಾಡೋದು ಬೇಡ. ಜ್ಞಾನ ಇಲ್ಲದ ಮುಖ್ಯಮಂತ್ರಿಯನ್ನು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ನೋಡುತ್ತಿದ್ದೇವೆ. ವಿರೋಧ ಪಕ್ಷದವರನ್ನು ಬೈಯ್ಯುವ ಸಮಾವೇಶ ಇದು ಅಂದ್ರು.

ಹುಚ್ಚ ಏನೇನೋ ಮಾತಾಡಿದ್ರೆ ನಾ ಉತ್ತರ ಕೊಡೋಕೆ ಆಗುತ್ತಾ ಎಂದು ಪ್ರಶ್ನಿಸಿದ ಈಶ್ವರಪ್ಪ, ನನ್ ಮನೇಲಿ ನೋಟು ಎಣಿಸುವ ಮಷಿನ್ ಇರೋದು, ಪ್ರಿಂಟಿಂಗ್ ಮಷಿನ್ ಅಲ್ಲ. ನನ್ನ ವ್ಯಾಪಾರದ ಹಣ ಎಣಿಸಲು ಇಂದಿಗೂ ನೋಟ್ ಕೌಂಟಿಂಗ್ ಮಿಷಿನ್ ಬಳಸುತ್ತೇನೆ. ಇದನ್ನ ವಿಧಾನಪರಿಷತ್ ನಲ್ಲೇ ಹೇಳಿದ್ದೇನೆ ಅಂತ ತಿಳಿಸಿದ್ರು.

ಇನ್ನೂ ಮೂರು ತಿಂಗಳು ಮಾತ್ರ ಈ ಸರ್ಕಾರ ಇರುತ್ತೆ. ಮುಂದೆ ನಿಮ್ಮ ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗುತ್ತೆ ಅಂತ ಇದೇ ವೇಳೆ ಈಶ್ವರಪ್ಪ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *