ಈಶ್ವರಪ್ಪ ಒಬ್ಬ ಮಾಧ್ಯಮ ಎಂಟರ್‌ಟೈನ್‌ಮೆಂಟ್‌: ಎಂಬಿ ಪಾಟೀಲ್

Public TV
1 Min Read

ವಿಜಯಪುರ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಒಬ್ಬ ಮಾಧ್ಯಮ ಎಂಟರ್‌ಟೈನ್‌ಮೆಂಟ್‌. ಅವರ ಮಾತಿಗೆ ಹೆಚ್ಚಿನ ಕಿಮ್ಮತ್ತು ಇಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಟಾಂಗ್ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಶ್ವರಪ್ಪ ಅವರ ಮಾತಿಗೆ ಬೆಲೆ ಇಲ್ಲ. ಅವರು ಮಾಧ್ಯಮ ಎಂಟರ್‌ಟೈನ್‌ಮೆಂಟ್‌. ಅವರ ಬಗ್ಗೆ ನಾನು ಮಾತನಾಡಲ್ಲ ಎಂದರು.

ನಾನು ನೀರಾವರಿ ಸಚಿವನಿದ್ದಾಗ ಮಾಡಿರುವ ಕೆಲಸ ಇಡೀ ಜಗತ್ತಿಗೆ ಗೊತ್ತಿದೆ. ನನ್ನ ಕೆಲಸ ಸೂರ್ಯ ಹಾಗೂ ಚಂದ್ರ ನೋಡಿದ್ದಾರೆ. ನಾನು ನನ್ನ ಲೆವಲ್ ಜನರ ಜೊತೆಗೆ ಮಾತನಾಡುತ್ತೇನೆ. ನನ್ನ ಲೆವಲ್ ಕೆಳಗೆ ಇರುವವರ ಬಗ್ಗೆ ಮಾತನಾಡಲ್ಲ. ನಾನು ಪ್ರಧಾನಿ ಮೋದಿ, ಬಿಎಸ್‍ವೈಗೆ ಉತ್ತರ ನೀಡುತ್ತೇನೆ ಎಂದು ಶಾಸಕ ಎ.ಎಸ್ ನಡಹಳ್ಳಿ ಅವರ ಕಾಲೆಳೆದರು.

ನನ್ನ ಹಾಗೂ ನನ್ನ ತಾಯಿ ತಂದೆ ಸರ್ಟಿಫಿಕೇಟ್‍ನಲ್ಲಿ ಹಿಂದೂ ಲಿಂಗಾಯತ ಅಂತ ಇದೆ. ಉಳಿದವರು ಟಿಸಿ, ಜನ್ಮ ಸರ್ಟಿಫಿಕೇಟ್ ತೆಗೆದು ಅದರಲ್ಲಿ ಏನಿದೆ ಎಂದು ನೋಡಿಕೊಂಡು ಮಾತನಾಡಿ ಎಂದು ನಡಹಳ್ಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಇನ್ನು ಲಿಂಗಾಯತ ಧರ್ಮ ನಮ್ಮ ಅಸ್ಮಿತೆ. ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಧರ್ಮವನ್ನು ಬಳಸಿಕೊಂಡಿಲ್ಲ. ಲಿಂಗಾಯತರನ್ನು ಕೂಡ ನಾನು ಬಳಸಿಕೊಂಡಿಲ್ಲ. ಲಿಂಗಾಯತ ಧರ್ಮದ ಹೋರಾಟ ಯಾವುದೇ ಪಕ್ಷಕ್ಕೆ ಸಂಬಂಧಪಟ್ಟಿಲ್ಲ. ಲಿಂಗಾಯತ ಚುನಾವಣೆ ವಿಚಾರವಲ್ಲ. ನ್ಯಾಯಾಲಯಕ್ಕೆ ಹೋಗಬೇಕೋ, ಬೇಡವೋ ಎನ್ನುವುದನ್ನು ಜಾಗತಿಕ ಲಿಂಗಾಯತ ಮಹಾಸಭಾದವರು ತೀರ್ಮಾನ ಮಾಡುತ್ತಾರೆ. ಚುನಾವಣೆಯಲ್ಲಿ ಲಿಂಗಾಯತ ಬಗ್ಗೆ ಮಾತನಾಡುವುದಿಲ್ಲ. ಹಿಂದೆಯೂ ಮಾತನಾಡಿಲ್ಲ, ಈಗಲೂ ಮಾತನಾಡಲ್ಲ ಎಂದರು.

ಅಲ್ಲದೆ ಲಿಂಗಾಯತ ಹೋರಾಟದಿಂದ ನಾನು ಡೌನ್ ಆಗಿಲ್ಲ. ಜನರು ನಮ್ಮ ಜೊತೆಗೆ ಇದ್ದಾಗ ಡೌನ್ ಆಗಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದದಲ್ಲಿ 28 ರಲ್ಲಿ 20 ಸೀಟ್ ಕಾಂಗ್ರೆಸ್ ಗೆಲ್ಲುವುದು ಪಕ್ಕಾ. ಅಲ್ಲದೆ ವಿಜಯಪುರ ಮೈತ್ರಿ ಅಭ್ಯರ್ಥಿ 1 ಲಕ್ಷ ಮತಗಳಿಂದ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *